ಮಂಡ್ಯ: ಮೂರ್ಛೆ ರೋಗಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಬಿದ್ದು, ನರಳಾಡಿದ್ದು, ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮೈಸೂರು ನಗರದ ರಮಾಬಾಯಿ ನಗರದ ನಿವಾಸಿ ಸ್ವಾಮಿ ಮೃತಪಟ್ಟ ದುರ್ದೈವಿ. ಇವರು ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು, ಇವರು ಭಾನುವಾರ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೆಂಜರ್ ರೈಲಿನಲ್ಲಿ ಹೊರಟಿದ್ದರು. ಮೈಸೂರಿನಲ್ಲಿ ರೈಲಿಗೆ ಹತ್ತುತ್ತಿದ್ದ ಸಂದರ್ಭ ಅವರಿಗೆ ಮೂರ್ಛೆ ಕಾಣಿಸಿದೆ. ಹೀಗಾಗಿ ಕುಸಿದು ರೈಲಿನಲ್ಲಿಯೇ ಬಿದ್ದಿದ್ದಾರೆ. ಇದನ್ನು ಕಂಡ ಸಹ ಪ್ರಯಾಣಿಕರು ಮೈಸೂರಿನಲ್ಲೇ ರೈಲ್ವೆ ಪೊಲೀಸರಿಗೆ, ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಆದರೆ ಸಿಬ್ಬಂದಿ ಚಿಕಿತ್ಸೆ ಕೊಡಿಸುವಲ್ಲಿ ವಿಳಂಬ ಮಾಡಿದ್ದಾರೆ.
ಅಷ್ಟೇ ಅಲ್ಲದೆ ರೋಗಿ ಸ್ವಾಮಿಗೆ ಮೈಸೂರಿನಿಂದ ಮಂಡ್ಯದ ತನಕವೂ ಯಾವುದೇ ಚಿಕಿತ್ಸೆ ದೊರಕದ ಕಾರಣ ಮಂಡ್ಯ ತಲುಪುವ ಹೊತ್ತಿಗೆ ನರಳಿ ನರಳಿ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ರೈಲ್ವೆ ಅಧಿಕಾರಿಗಳು, ಪೊಲೀಸರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದ ಸಹ ಪ್ರಯಾಣಿಕರು ದೂರಿದ್ದಾರೆ. ಮಂಡ್ಯದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದ್ದು, ಮಂಡ್ಯ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.