ಭಾರತೀನಗರ: ಇಲ್ಲಿಗೆ ಸಮೀಪದ ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಧವಸ ಧಾನ್ಯ ಸಂಗ್ರಹ ಮಾಡಲು ಕೆ.ಎಂ.ದೊಡ್ಡಿಗೆ ಆಗಮಿಸಿದ್ದ ಶ್ರೀಬಸವೇಶ್ವರಸ್ವಾಮಿ ಬಸವಪ್ಪನಿಗೆ ಭಕ್ತಾಧಿಗಳು ಪೂಜೆಸಲ್ಲಿಸಿದರು.
ಭಾರತೀನಗರದ ಮದ್ದೂರು ಮಳವಳ್ಳಿ ಮುಖ್ಯರಸ್ತೆಯ ಮೂಲಕ ಕೆ.ಎಂ.ದೊಡ್ಡಿ ಮಾರಿಗುಡಿ ರಸ್ತೆಗೆ ಬಸವಪ್ಪ ಕಾಲ್ನಡಿಗೆಯಲ್ಲಿ ಆಗಮಿಸಿ ಭಕ್ತಾಧಿಗಳು ನೀಡುವ ದವಸಧಾನ್ಯ ಸಂಗ್ರಹಿಸಿತು. ಕೆ.ಎಂ.ದೊಡ್ಡಿಯ ಭಕ್ತಾಧಿಗಳು ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಜಾತ್ರಾಮಹೋತ್ಸವಕ್ಕೆ ಪುರಾತನ ಕಾಲದಿಂದಲೂ ಧವಸ-ಧಾನ್ಯಗಳನ್ನು ನೀಡುವ ಪದ್ಧತಿ ಇದ್ದು, ಅದರಂತೆ ಭಕ್ತಾಧಿಗಳಿಂದ ಕಾಣಿಕೆಯನ್ನು ಪಡೆಯಲು ಆಗಮಿಸಿತು. ಈ ವೇಳೆ ಶ್ರೀಬಸವೇಶ್ವರಸ್ವಾಮಿ ಬಸವಪ್ಪನನ್ನು ಮಹಿಳೆಯರು ಆರತಿ ಮಾಡುವ ಮೂಲಕ ಬರಮಾಡಿಕೊಂಡು ಪೂಜೆಸಲ್ಲಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಅರ್ಧಕ್ಕೆ ನಿಂತಿರುವ ಕೌಂಪೌಂಡ್ ಬಳಿ ಕಾರ್ಕಹಳ್ಳಿ ನೂತನ ಶ್ರೀಬಸವಪ್ಪ ತೆರಳಿತು. ಅಚ್ಚರಿ ಎಂದರೆ ಇತ್ತೀಚಿಗೆ ನಿಧನಗೊಂಡ ಕಾರ್ಕಹಳ್ಳಿ ಶ್ರೀಬಸವೇಶ್ವರಸ್ವಾಮಿ ಬಸವಪ್ಪನು ಸಹ ಅರ್ಧಕ್ಕೆ ನಿಂತಿದ್ದ ಕಾಂಪೌಂಡ್ ಸ್ಥಳಕ್ಕೆ ತೆರಳಿ ಅಡ್ಡಿಪಡಿಸಿದ್ದ ವ್ಯಕ್ತಿಯ ಮನೆಗೆ ನುಗ್ಗಿ ಎಚ್ಚರಿಕೆ ನೀಡಿತ್ತು. ಆದರೂ ಕಾಂಪೌಂಡ್ ಪೂರ್ಣಗೊಂಡಿರಲಿಲ್ಲ.
ನೂತನ ಬಸವಪ್ಪನು ಸಹ ಕೆ.ಎಂ.ದೊಡ್ಡಿ ಗ್ರಾಮಕ್ಕೆ ದವಸ- ಧಾನ್ಯಗಳನ್ನು ಸಂಗ್ರಹ ಮಾಡಲು ಬಂದ ವೇಳೆ ಅಪೂರ್ಣಗೊಂಡಿರುವ ಕಾಂಪೌಂಡ್ ತೆರಳಿತು. ಇದಕ್ಕೂ ಮೊದಲು ಕಾಂಪೌಡ್ ನಿರ್ಮಾಣಕ್ಕೆ ಅಡ್ಡಿಪಡಿಸಲು ಮುಂದಾದ ವ್ಯಕ್ತಿಯ ಮನೆಗೆ ಒಳಗೆ ಪ್ರವೇಶ ಮಾಡಿ ಅಚ್ಚರಿ ಮೂಡಿಸಿತು. ಮನೆಯವರು ಬಸವಪ್ಪನಿಗೆ ಪೂಜೆಸಲ್ಲಿಸಿದರು. ನಂತರ ಬಸವಪ್ಪ ಮನೆಯಿಂದ ಹಿಂತಿರುಗಿತು. ಮುಂದಿನ ದಿನಗಳಲ್ಲಿ ಕಾಂಪೌಂಡ್ ನಿರ್ಮಾಣಗೊಳ್ಳುವುದೇ ಎಂಬುವುದು ಭಕ್ತಾಧಿಗಳಲ್ಲಿ ಯಕ್ಷ ಪ್ರಶ್ನೆಯಾಗಿದೆ.