ಶ್ರೀರಂಗಪಟ್ಟಣ, ಜ. 7 : ಶಾಲೆಗೆ ಮೊಬೈಲ್ ಫೋನ್ ತಂದಿದ್ದ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕಿಯೊಬ್ಬರು ಅಮಾನವೀಯವಾಗಿ ನಡೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನ ಶಾಲೆಯಲ್ಲಿ ಇಂಥ ಘಟನೆ ನಡೆದಿದ್ದು, ಮಾಧ್ಯಮಗಳ ವರದಿ ಬಳಿಕ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಶಾಲೆಗೆ ಮೊಬೈಲ್ ತಂದ ವಿದ್ಯಾರ್ಥಿನಿಯನ್ನು ಆ ಶಾಲೆಯ ಮುಖ್ಯ ಶಿಕ್ಷಕಿ ಪ್ರಶ್ನಿಸಿದ್ದಾರೆ. ನಂತರ ವಿದ್ಯಾರ್ಥಿನಿಯನ್ನು ಶಿಕ್ಷಿಸುವ ಉದ್ದೇಶದಿಂದ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿಯನ್ನು ಶಾಲೆಯ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿದೆ. ಅಲ್ಲದೆ, ಆಕೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲೇ ಇರುವಂತ್ತೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಅಮಾನವೀಯ ಘಟನೆ ಬಗ್ಗೆ ಸ್ಥಳೀಯರಿಗೂ ತಿಳಿದು ಬಂದಿಲ್ಲ.
ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಂಟನೇ ತರಗತಿ ವಿದ್ಯಾರ್ಥಿನಿ ಶಾಲೆಗೆ ಮೊಬೈಲ್ ತಂದಿದ್ದನ್ನು ದೊಡ್ಡ ಪ್ರಮಾದ ಎಂದು ಮುಖ್ಯ ಶಿಕ್ಷಕಿ ಪರಿಗಣಿಸಿದ್ದಾರೆ. ವಿದ್ಯಾರ್ಥಿನಿ ಬಳಿ ಮೊಬೈಲ್ ಇರೋದನ್ನು ಗಮನಿಸಿ, ಆಕೆಯನ್ನು ಬೇರೊಂದು ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿನಿಯ ವಿಚಾರಣೆ ನಡೆಸಿದ್ದಲ್ಲದೆ, ನಂತರ ಮೊಬೈಲ್ ಕಸಿದು ಕೊಂಡು ಅದೇ ಕೊಠಡಿಯಲ್ಲಿ ವಿದ್ಯಾರ್ಥಿನಿಯನ್ನು ಕೂಡಿ ಹಾಕಲಾಗಿದೆ.
ತೀವ್ರ ಖಂಡನೆ:
ಮುಖ್ಯ ಶಿಕ್ಷಕಿ ಸ್ನೇಹಲತಾ ಅಮಾನವೀಯ ನಡೆಗೆ ಸ್ಥಳೀಯರು, ಪೋಷಕರಿಂದ ಆಕ್ರೋಶ ವ್ಯಕ್ತವಾಗಿದೆ. ಮುಖ್ಯ ಶಿಕ್ಷಕಿಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಬಾಲಕಿಯನ್ನ ಅಮಾನವೀಯವಾಗಿ ನಡೆಸಿಕೊಂಡಿರುವ ಮುಖ್ಯಶಿಕ್ಷಕಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹುಡುಗರನ್ನು ಕರೆಸುವೆ ಎಂದ ಶಿಕ್ಷಕಿ
ಮುಖ್ಯ ಶಿಕ್ಷಕಿಯ ಬೈಗುಳದಿಂದ ನೊಂದಿದ್ದ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿ ಕೊಠಡಿಯಲ್ಲೇ ಇರುವಂತೆ ಸೂಚಿಸಲಾಗಿದೆ. ಇದಕ್ಕೆ ಒಪ್ಪದೆ ಸುಮ್ಮನೆ ನಿಂತಿದ್ದ ವಿದ್ಯಾರ್ಥಿನಿ ನೋಡಿ ಕೋಪಗೊಂಡ ಮುಖ್ಯ ಶಿಕ್ಷಕಿ, ಬಟ್ಟೆ ಬಿಚ್ಚದಿದ್ದರೆ, ಬಟ್ಟೆ ಬಿಚ್ಚಲು ಹುಡುಗರನ್ನು ಕರೆಸುತ್ತೇನೆ ಎಂದು ಗದರಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಕೇಸ್
ಪೋಷಕರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು, ಮಕ್ಕಳ ವಿರುದ್ಧ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಈ ಪ್ರಕರಣ ಬರಲಿದ್ದು, ಪೋಕ್ಸೋ ಕಾಯ್ದೆಯಡಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ ಎಂದಿದ್ದಾರೆ.
ತನಿಖೆಗೆ ಸಹಕರಿಸಿರುವ ಶಾಲಾ ಮಂಡಳಿ
ತರಗತಿಯಲ್ಲಿ ನಡೆದ ಘಟನೆ ಬಗ್ಗೆ ಕಣ್ಣೀರಿಟ್ಟು ಎಲ್ಲವನ್ನು ವಿದ್ಯಾರ್ಥಿನಿ ವಿವರಿಸಿದ ಬಳಿಕ ಪೋಷಕರು ಮೊದಲಿಗೆ ಗ್ರಾಮದ ಮುಖ್ಯಸ್ಥರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಶಾಲಾ ಆಡಳಿತ ಮಂಡಳಿಗೂ ದೂರು ನೀಡಿದ್ದಾರೆ. ಪೊಲೀಸರಿಗೂ ದೂರು ನೀಡಿದ್ದಾರೆ. ದೂರಿನ ಪ್ರತಿಯನ್ನು ಶಿಕ್ಷಣ ಮಂಡಳಿ ಡಿಡಿಪಿಐ ಕಚೇರಿಗೂ ತಲುಪಿಸಲಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಲಾಗಿದೆ.
ಮುಖ್ಯ ಶಿಕ್ಷಕಿ ಅಮಾನತು
ಘಟನೆ ಬಗ್ಗೆ ವಿವರ ಪಡೆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಡಿಪಿಐ ರಘುನಂದನ್, ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಕ್ತ ಕ್ರಮ ಜರುಗಿಸಲು ಸೂಚಿಸಲಾಗಿದ್ದು, ಅದರಂತೆ ಮುಖ್ಯ ಶಿಕ್ಷಕಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಬಿಇಒ ಹಾಗೂ ತಹಸೀಲ್ದಾರರಿಂದ ತನಿಖೆ ನಡೆಸಿ ವರದಿಯನ್ನು ಪಡೆಯಲಾಗುತ್ತದೆ ಎಂದರು.