ಮದ್ದೂರು : ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ 16ಕ್ಕೂ ಹೆಚ್ಚು ಕುರಿಗಳು ಮೃತ ಪಟ್ಟಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿಯ ಹರಳಕೆರೆ ಗ್ರಾಮದಲ್ಲಿ ನಡೆದಿದೆ.
ಹರಳಕೆರೆ ಗ್ರಾಮದ ಪುಟ್ಟಣ್ಣಯ್ಯ ಅವರ ಪುತ್ರ ಕಾರ್ತಿಕ್ ಹಾಗೂ ಕಸ್ತೂರಮ್ಮ ಅವರಿಗೆ ಸೇರಿದ ಕುರಿ ಮಂದೆ ಮೇಲೆ ದಾಳಿ ನಡೆಸಿದ ಚಿರತೆ ಸುಮಾರು 6 ಕುರಿಗಳನ್ನು ಸ್ಥಳದಲ್ಲೇ ತಿಂದು ಹಾಕಿದ್ದು 9ಕ್ಕೂ ಹೆಚ್ಚು ಕುರಿಗಳು ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದಾಗಿ ಸುಮಾರು 1.5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ರತ್ನಾಕರ್, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಹನುಮೇಗೌಡ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಸರ್ಕಾರದಿಂದ ಸಿಗುವ ಪರಿಹಾರವನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.