ಮಡಿಕೇರಿ: ಕೊಡಗಿನಲ್ಲಿ ಭಯಹುಟ್ಟಿಸಿದ್ದ ಮುಸುಕುಧಾರಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಭಯಗೊಂಡಿದ್ದ ಜನರು ನೆಮ್ಮದಿಯುಸಿರು ಬಿಡುವಂತಾಗಿದೆ.
ಸಿದ್ದಾಪುರ ಮೂಲದ ಮೂವತ್ತು ವರ್ಷದ ವ್ಯಕ್ತಿ ಆರೋಪಿಯಾಗಿದ್ದು, ಈತ ಮುಸುಕು ಹಾಕಿಕೊಂಡು ರಾತ್ರಿ ವೇಳೆ ಒಂಟಿ ಮನೆಗಳಿಗೆ ನುಗ್ಗಿ ಹೆದರಿಸುತ್ತಿದ್ದುದಲ್ಲದೆ ಸುಲಿಗೆಗೂ ಯತ್ನಿಸುತ್ತಿದ್ದನು.
ಕಳೆದ ಒಂದೂವರೆ ತಿಂಗಳಿನಿಂದ ದಕ್ಷಿಣ ಕೊಡಗಿನ ಕುಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ರೀತಿಯ ಕೃತ್ಯ ಎಸಗಿ ಭಯಹುಟ್ಟಿಸಿದ್ದನು. ಹೀಗಾಗಿ ಈತನ ಸೆರೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರು ನಿರ್ದೇಶನ ನೀಡಿ ವಿರಾಜಪೇಟೆ ಪೊಲೀಸ್ ಉಪ-ಅಧೀಕ್ಷಕರಾದ ಸಿ.ಟಿ. ಜಯಕುಮಾರ್ರವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತದ ವೃತ್ತ ನಿರೀಕ್ಷಕರಾದ ಸಿ.ಎ ಮಂಜಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಜಯರಾಮ್, ವಿರಾಜಪೇಟೆ ವೃತ್ತದ ವೃತ್ತ ನಿರೀಕ್ಷಕರಾದ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸೇರಿಸಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಮುಸುಕುಧಾರಿ ವ್ಯಕ್ತಿಯ ಸೆರೆಗೆ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು.
ಇದೀಗ ಕುಟ್ಟ ಠಾಣಾ ಪಿ.ಎಸ್.ಐ ಚಂದ್ರಪ್ಪ, ಶ್ರೀಮಂಗಲ ಠಾಣೆಯ ಪಿ.ಎಸ್.ಐ ರವಿಶಂಕರ್, ವಿರಾಜಪೇಟೆ ನಗರ ಠಾಣೆಯ ಪಿ.ಎಸ್.ಐ ಜಗದೀಶ ದೂಳಶೆಟ್ಟಿ, ಎ.ಎಸ್.ಐ ಫ್ರಾನ್ಸಿಸ್, ಚಂದ್ರು, ಸಣ್ಣಪ್ಪ, ಮಜೀದ್, ಮುಖ್ಯಪೇದೆ ದಿನೇಶ್ ಕುಮಾರ್, ರಾಜೇಶ್, ರಂಜಿತ್, ಹರೀಶ್ ಕುಮಾರ್, ಮನು, ಮಹಮ್ಮದ್ ಆಲಿ, ರಾಜೇಶ್, ಪಿ.ಸಿ ರವರಾದ ಸುರೇಶ್, ಗಿರೀಶ್, ಕೃಷ್ಣಮೂರ್ತಿ, ಕೃಷ್ಣ ಪ್ರಸಾದ್, ಹನುಮಂತ ಸಾಬು ತಳವಾರ, ಮುನೀರ್, ವಿನಾಯಕ, ಗೋಪಿನಾಥ್, ಮೋಹನ, ಅಭೀಷೇಕ್, ಬಶೀರ್ಅವರನ್ನೊಳಗೊಂಡ ತಂಡವು ಸತತ ಪ್ರಯತ್ನ ನಡೆಸಿ ಸಿದ್ದಾಪುರ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರೋಪಿಯು ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಾಲ್ಕೇರಿ ಗ್ರಾಮದ ಸುಳ್ಳಿಮಾಡ ಗೋಪಾಲ ತಿಮ್ಮಯ್ಯ ರವರಿಗೆ ಹಲ್ಲೆ ಮಾಡಿ ಸುಲಿಗೆ ಮಾಡಲು ಪ್ರಯತ್ನಿಸಿದ್ದು, ಕೋತೂರು ಗ್ರಾಮದ ಗಂಗಮ್ಮ ರವರ ಕಿವಿಯ ಓಲೆಗಳನ್ನು ಕಿತ್ತಿರುವುದು, ಕೋತೂರು ಗ್ರಾಮದ ವನದೇವತೆ ದೇವಾಲಯದ ಗಣೇಶ ವಿಗ್ರಹಗಳನ್ನು ಭಗ್ನ ಮಾಡಿರುವುದು, ಕೋತೂರು ಗ್ರಾಮದ ಮಹದೇಶ್ವರ ದೇವಾಲಯದ ಹುಂಡಿ ಕಳವು ಮತ್ತು ಸೋಮವಾರಪೇಟೆ ಬಜೆಗುಂಡಿ ಗ್ರಾಮದ ಅಯ್ಯಪ್ಪ ದೇವಸ್ಥಾನದ ಹುಂಡಿ ಕಳವು ಮಾಡಿದ್ದಾನೆ. ಎಸ್ಪಿ ಕ್ಷಮಾಮಿಶ್ರ ಅವರು ಆರೋಪಿಯನ್ನು ಬಂಧಿಸಿದ ತನಿಖಾ ತಂಡವನ್ನು ಪ್ರಶಂಸಿಸಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.