ಮಡಿಕೇರಿ: ಸುಮಾರು ಐದು ವರ್ಷಗಳ ಕಾಲ ಅತಿವೃಷ್ಠಿಯಿಂದಾಗಿ ಮಳೆಗಾಲದಲ್ಲಿ ಕೊಡಗಿನವರು ಸಮಸ್ಯೆ ಎದುರಿಸಿದ್ದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಕಳೆದ ವರ್ಷದ ಮುಂಗಾರಿನಲ್ಲಿ ವಾಡಿಕೆಯ ಮಳೆ ಬಾರದ ಕಾರಣದಿಂದ ಬೇಸಿಗೆಯ ಆರಂಭದಲ್ಲಿಯೇ ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದೆಡೆ ಕಾವೇರಿ ನದಿ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರೆ, ಕೆರೆಕಟ್ಟೆ, ಜಲಾಶಯಗಳಲ್ಲಿ ನೀರು ಪಾತಾಳ ಸೇರಿದೆ. ಹೀಗಾಗಿ ಮುಂದೆ ಮಳೆ ಬಾರದೆ ಹೋದರೆ ಹೇಗಪ್ಪಾ ಎಂದು ಆಕಾಶ ನೋಡುವಂತಾಗಿದೆ. ಇಷ್ಟರಲ್ಲೇ ಮಳೆ ಸುರಿಯ ಬೇಕಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಬಂದಿದೆಯಾದರೂ ಜಿಲ್ಲೆಯಾದ್ಯಂತ ಮಳೆ ಬಾರದೆ ಕಾಫಿ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಜಲಮೂಲಗಳಾದ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದಲ್ಲಿ ನೀರು ಪಾತಾಳಕ್ಕಿಳಿದಿದೆ. ಕೆಲ ತಿಂಗಳ ಹಿಂದೆಯೇ ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯಲ್ಲಿ ನೀರು ಆರಿಹೋಗಿ ಮುಳುಗಿಹೋಗಿದ್ದ ಶಿವದೇಗುಲ ಪ್ರತ್ಯಕ್ಷವಾಗಿತ್ತು. ಇದು ಬೇಸಿಗೆಯಲ್ಲಿ ಎದುರಾಗಬಹುದಾದ ದುರಂತವನ್ನು ಸೂಚಿಸಿತ್ತು. ಈಗಂತೂ ಬಿಸಿಲಿನ ಝಳಕ್ಕೆ ನೀರು ಆವಿಯಾಗುತ್ತಿದ್ದು ಕುಡಿಯಲು ನೀರು ಉಳಿಸಿಕೊಳ್ಳುವುದೇ ಕಷ್ಟವಾಗಿದೆ.
ಹಾಗೆನೋಡಿದರೆ ಕೊಡಗಿನಲ್ಲಿ ಸಮರ್ಪಕ ಮ,ಳೆಯಾಗದ ಕಾರಣದಿಂದ ಕಾವೇರಿ ನದಿ ಧುಮ್ಮಿಕ್ಕಿ ಹರಿಯಲೇ ಇಲ್ಲ. ಇದರ ಪರಿಣಾಮ ಮಂಡ್ಯದ ಜೀವನಾಡಿ ಕೆಆರ್ ಎಸ್ ಜಲಾಶಯ ಭರ್ತಿಯಾಗಲಿಲ್ಲ. ಆದರೆ ಒಂದಷ್ಟು ಸುರಿದ ಮುಂಗಾರು ಮಳೆಗೆ ಕೊಡಗಿನಲ್ಲಿರುವ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯಗಳು ಭರ್ತಿಯಾಗಿದ್ದವು. ಆದರೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆಯಿಂದಾಗಿ ಹಾರಂಗಿ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳಲಾಗಲಿಲ್ಲ. ಈ ನಡುವೆ ರೈತರ ಕೃಷಿಗೆಂದೇ ನಿರ್ಮಿಸಲಾದ ಚಿಕ್ಲಿಹೊಳೆ ಜಲಾಶಯಕ್ಕೆ ನೀರು ಹರಿದು ಬಂದಿದ್ದರಿಂದ ಜಲಾಶಯ ಭರ್ತಿಯಾಗಿತ್ತಲ್ಲದೆ, ಹೆಚ್ಚುವರಿ ನೀರು ಕೂಡ ಹರಿದು ಹೋಗಿತ್ತು. ಆದರೆ ಈಗ ಇದರಲ್ಲಿಯೂ ನೀರು ಇಲ್ಲದಂತಾಗಿದೆ.
ಇನ್ನು ಜಿಲ್ಲೆಯ ಬಹಳಷ್ಟು ಮಂದಿ ನಿಸರ್ಗದ ಜಲಮೂಲಗಳನ್ನು ನೀರಿಗಾಗಿ ನಂಬಿಕೊಂಡಿದ್ದಾರೆ. ಇದರ ಜತೆಗೆ ಮನೆ ಬಳಕೆಗೆ ಬಾವಿ ನೀರನ್ನು ಬಳಸುತ್ತಿದ್ದಾರೆ. ಈಗ ಬಾವಿಯಲ್ಲಿ ನೀರು ನಿಧಾನವಾಗಿ ಆರುತ್ತಿದೆ. ಮುಂದೆ ಮಳೆ ಬಾರದೆ ಹೋದರೆ ಬಾವಿಗಳು ಒಣಗಿ ಹೋಗುವ ಮಟ್ಟಕ್ಕೆ ಹೋದರೂ ಅಚ್ಚರಿಯಿಲ್ಲ. ಹೀಗಾಗಿ ಕೊಡಗಿನ ಜನ ಮಳೆ ಯಾವಾಗ ಬರುತ್ತದೆ ಎಂದು ಆಕಾಶ ನೋಡುವಂತಾಗಿದೆ. ಮಳೆ ಬರುವ ತನಕ ನೆಮ್ಮದಿ ಇಲ್ಲದಂತಾಗಿದೆ.