ಮೈಸೂರು: ರಾಜ್ಯದಲ್ಲಿ ಯಾರೂ ನಿರೀಕ್ಷೆಯನ್ನೇ ಮಾಡದ ಲೋಕಸಭಾ ಅಭ್ಯರ್ಥಿ ಎಂದರೆ ಅದು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡುವುದಾಗಿದೆ.
ಆದರೆ, ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವುದಕ್ಕೆ ಪ್ರಭಲ ಪೈಪೋಟಿ ಅಭ್ಯರ್ಥಿಯನ್ನು ಹುಡುಕದೇ, ಸ್ಥಳೀಯ ನಾಯಕ ಎಂ. ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿದೆ. ಈಗ ಮಹಾರಾಜ ಯದುವೀರ್ ಅವರ ವಿರುದ್ಧ ಚುನಾವಣಾ ಪ್ರಚಾರಕ್ಕಾಗಿ ಕಾಂಗ್ರೆಸ್ನಿಂದ ನಟಿ ರಮ್ಯಾ ಅವರನ್ನು ಕರೆತರುವುದಕ್ಕೆ ಕೈ ಮುಖಂಡರು ಪ್ಲ್ಯಾನ್ ಮಾಡಿದ್ದಾರೆ.
ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಸಂಸದ ಪ್ರತಾಪ್ ಸಿಂಹ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು. ಇನ್ನು ರಾಜ್ಯದ ಬೇರಾವ ಸಂಸದನೂ ಕೂಡ ಮೈಸೂರು ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದೇ ಎಲ್ಲರೂ ಹೇಳುತ್ತಿದ್ದರು.
ಆದರೆ, ಎಷ್ಟೇ ಅಭಿವೃದ್ಧಿ ಕಾರ್ಯ ಮಾಡಿದರೂ 2024ರ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡದೇ, ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಹಾರಾಜ ಯದುವೀರ್ ಅವರು ಈಗಾಗಲೇ ಸ್ಥಳೀಯ ಮಟ್ಟಕ್ಕಿಳಿದು ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ.
ರಂಗೇರುತ್ತಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಈಗ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪರವಾಗಿ ಸ್ಟಾರ್ ಪ್ರಚಾರಕಿಯಾಗಿ ಮಾಜಿ ಸಂಸದೆ ನಟಿ ರಮ್ಯ ಕರೆತರಲು ಕೈ ನಾಯಕರ ಪ್ಲ್ಯಾನ್ ಮಾಡಿದ್ದಾರೆ. ನಟಿ ರಮ್ಯ ಅವರ ಪಾಪ್ಯುಲಾರಿಟಿ ಬಳಸಿಕೊಳ್ಳಲು ಕಾಂಗ್ರೆಸ್ ಚಿಂತನೆ ಮಾಡಲಾಗಿದ್ದು, ಮೈಸೂರು, ಮಂಡ್ಯ ಕ್ಷೇತ್ರಗಳಲ್ಲಿ ಮಾಜಿ ಸಂಸದೆಯ ಪ್ರಚಾರಕ್ಕೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ.