ವಿರಾಜಪೇಟೆ: ವಿರಾಜಪೇಟೆ ಪುರಸಭೆಯಲ್ಲಿ ೨೦೨೨ ಹಾಗೂ ೨೦೨೩ ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯನ್ನು ಪುರಸಭೆ ಕಛೇರಿಯಲ್ಲಿ ಪುರಸಭಾ ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಸಭೆಯ ಮೊದಲಿಗೆ ಪುರಸಭೆ ಸದಸ್ಯ ಮೊಹಮ್ಮದ್ ರಾಫಿ ವಿರಾಜಪೇಟೆ ನಗರದ ಹಲವು ರಸ್ತೆಗಳಲ್ಲಿ ವಾಹನ ಶುಲ್ಕ ಎತ್ತುವಳಿ ವಾರ್ಷಿಕ ಹರಾಜು ಪ್ರಕ್ರಿಯೆ ಮಾಡಬೇಕೆಂದುಕೊಂಡಿರುವುದು ಗಮನಕ್ಕೆ ಬಂದಿದೆ ಅದಕ್ಕೆ ನನ್ನ ಸಂಪೂರ್ಣ ವಿರೋಧವಿದೆ ಎಂದು ವಿರೋಧ ವ್ಯಕ್ತಪಡಿಸಿದರು.
ಇದಕ್ಕೆ ಆಡಳಿತ ಪಕ್ಷದ ನಾಮನಿರ್ದೇಶನ ಸದಸ್ಯರಾದ ಸಚಿನ್ ಅವರು ಕೆಲವು ಅಂಗಡಿ ಮಾಲೀಕರು ಬೆಳ್ಳಿಗ್ಗೆ ಅಂಗಡಿ ಮುಂದೆ ತಮ್ಮ ವಾಹನ ನಿಲ್ಲಿಸಿದರೆ ಸಂಜೆವರೆಗೂ ತೆಗೆಯುವುದಿಲ್ಲ. ಪಾರ್ಕಿಂಗ್ ಶುಲ್ಕ ವಿಧಿಸಿದರೆ ವಾಹನ ಮಾಲೀಕರಿಗೆ ಸ್ವಲ್ಪಮಟ್ಟಿಗಿನ ಬದ್ಧತೆಯಾದರು ಬರುತ್ತದೆ ಎಂದು ಪ್ರತ್ಯುತ್ತರ ನೀಡಿದರು.
ಇದಕ್ಕೆ ವಿಪಕ್ಷ ಸದಸ್ಯ ರಾಜೇಶ್ ಪದ್ಮನಾಭ ಪುರಸಭೆ ಕಛೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ, ತಾಲ್ಲೋಕು ಕಛೇರಿಯಲ್ಲಿ ವಾಹನ ಪಾರ್ಕಿಂಗ್ ಕೊಟ್ಟಿಲ್ಲ ಹಾಗಿದ್ದ ಮೇಲೆ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ಪಾರ್ಕಿಂಗ್ ಶುಲ್ಕ ವಿಧಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯ ರಜನಿಕಾಂತ್ ಅವರು ಮೊದಲು ಮುರಿದು, ಗುಂಡಿ ಬಿದ್ದಿರುವ ರಸ್ತೆಯ ಇಕ್ಕೆಲಗಳನ್ನು ಸರಿಪಡಿಸಿ ಎಷ್ಟೋ ಕಡೆ ರಸ್ತೆಯ ಅಂಚುಗಳು ಗುಂಡಿಬಿದ್ದು, ಇಂಟರ್ ಲಾಕ್ ಕಿತ್ತುಬಂದಿರುವ ಕಾರಣ ವಾಹನಗಳನ್ನು ರಸ್ತೆ ಮಧ್ಯೆ ನಿಲ್ಲಿಸುವ ಪರಿಸ್ಥಿತಿ ಇದೆ. ಮೊದಲು ಸರಿಯಾದ ಸೌಲಭ್ಯಕೊಟ್ಟು ನಂತರ ನಿಲುಗಡೆ ಶುಲ್ಕ ಪಡೆಯಿರಿ ಎಂದರು.
ಪುಸರಭೆ ಸದಸ್ಯರಾದ ದೇಚಮ್ಮ ಕಾಳಪ್ಪ ಮಾತನಾಡುತ್ತಾ, ತಾಲ್ಲೋಕು ಕಛೇರಿ, ನ್ಯಾಯಲಯ, ಆಸ್ಪತ್ರೆ, ಶಾಸಕರ ಕಛೇರಿ , ಪುರಸಭೆ ಇಲ್ಲಿಗೆಲ್ಲಾ ಜನಸಾಮಾನ್ಯರು ತಮ್ಮ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ಈ ರಸ್ತೆಯಲ್ಲಿರುವ ಕಚೇರಿಗಳಿಗೆ ಬರುತ್ತಾರೆ. ಆದರೆ ಅಂಥ ಸಾಮಾನ್ಯ ಜನರ ವಾಹನಗಳಿಗೆ ನೀವು ಶುಲ್ಕ ವಿಧಿಸಿದರೆ ಜನರಿಗೆ ಈ ಕಷ್ಟಕಾಲದಲ್ಲಿ ಮತ್ತಷ್ಟು ಹೊರೆ ಹೊರಿಸಿದಂತಾಗುತ್ತದೆ ಎಂದರು.
ಸದಸ್ಯರಾದ ರಂಜಿ ಪೂಣಚ್ಚ ಐದು ರೂಪಾಯಿ ಶುದ್ದ ಕುಡಿಯುವ ನೀರು ಕುಡಿಯಲು ತೆಗೆದುಕೊಳ್ಳಲು ಹತ್ತು ರೂಪಾಯಿ ವಾಹನ ಶುಲ್ಕ ಕಟ್ಟುವುದು ಇದು ಯಾವ ನ್ಯಾಯ? ಎನ್ನುವ ಪ್ರಶ್ನೆ ಎತ್ತಿದರು. ಕೊನೆಗೆ ಪುರಸಭೆಯ ಹಿರಿಯ ಸದಸ್ಯ ಪೃಥ್ವಿನಾಥ್ ಅವರು ಮುಖ್ಯಾಧಿಕಾರಿಯವರಿಗೆ ಬಹುಮತ ಸಾಬೀತು ಮಾಡಿಸಲು ತಿಳಿಸಿದರು. ಆದರೆ ಮುಖ್ಯಾಧಿಕಾರಿ ಈ ವಿಚಾರವನ್ನು ಬಹುಮತಕ್ಕೆ ಹಾಕಲು ಬರುವುದಿಲ್ಲ ಎಂದರು. ಇದಕ್ಕೆ ವಿಪಕ್ಷ ಸದಸ್ಯರು ವೇದಿಕೆಯ ಮುಂಭಾಗಕ್ಕೆ ಬಂದು ನೆಲದಲ್ಲಿ ಕುಳಿತು ಆಡಳಿತ ಪಕ್ಷಕ್ಕೆ, ಮುಖ್ಯಾಧಿಕಾರಿಯವರಿಗೆ ಧಿಕ್ಕಾರ ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ತಮ್ಮ ಪಕ್ಷದ ಪರ ಘೋಷಣೆ ಕೂಗಿದರು.
ಈ ವಿಚಾರವಾಗಿ ಸುಮಾರು ಮೂರು ಘಂಟೆಗಳ ಕಾಲ ಚರ್ಚೆ ನಡೆಯಿತು ಆದರೆ ಯಾವ ತಾರ್ಕಿಕ ಅಂತ್ಯಕ್ಕೂ ಬಾರದ ಕಾರಣ ಪುರಸಭೆ ಅಧ್ಯಕ್ಷೆ ಈ ಸಭೆಯನ್ನು ರದ್ದು ಪಡಿಸುತ್ತಿರುವುದಾಗಿ ಘೋಷಿಸಿದರು. ಬಳಿಕ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಪರಸ್ಪರ ಮಾದ್ಯಮಗಳ ಜೊತೆಗೆ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡರು.
ಆಡಳಿತ ಪಕ್ಷದ ಸದಸ್ಯರು ಮಾತನಾಡುತ್ತಾ, ವಿರಾಜಪೇಟೆಯಲ್ಲಿ ಕಳೆದ ಬಾರಿ ವಾಹನ ಶುಲ್ಕ ಎತ್ತುವಳಿ ಮಾಡದಂತೆ ತಡೆ ಹಿಡಿದೆದ್ದವು ಆದರೆ ಈ ಬಾರಿ ಈ ಪೇ ಪಾರ್ಕಿಂಗ್ ಮಾಡಲು ಆಡಳಿತ ಪಕ್ಷಗಳು ಹೊರಟಿವೆ. ಶಾಸಕರನ್ನು ಬೇಟಿ ಮಾಡಲು, ತಾಲ್ಲೋಕು ಕಛೇರಿಗೆ ಹೋಗುವವರು ಹತ್ತು ರೂಪಾಯಿ ಕೊಡುವುದು ಅಂದರೆ ಜನರಿಗೆ ಎಷ್ಟು ಹೊರೆ? ಗಾಂಧಿನಗರದಲ್ಲಿ ಪೇ ಪಾರ್ಕಿಂಗ್ ಮಾಡಿದರೆ ಅಲ್ಲಿನ ನಿವಾಸಿಗಳಿಗೂ ತೊಂದರೆ. ಬಹುಮತ ಸಾಬೀತು ಮಾಡಿ ಅಂದರೆ ಅದು ಸಾಧ್ಯವಿಲ್ಲ ಸಂವಿಧಾನ ವಿರೋಧಿ ನಡೆ ಪ್ರದರ್ಶನ ಮಾಡಿದ್ದಾರೆ. ಇದರ ವಿರುದ್ಧ ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಮಾತನಾಡುತ್ತಾ, ಅಜೆಂಡಾದಲ್ಲಿ ಇಲ್ಲದೇ ಇರುವ ವಿಚಾರಗಳ್ನನು ಎತ್ತಿಕೊಂಡು ಸಭೆ ನಡೆಯದ ಹಾಗೇ ಮಾಡಿದ್ದಾರೆ. ಪ್ರತಿಬಾರಿ ಕಾರ್ಯಸೂಚಿಯಲ್ಲಿ ಇಲ್ಲದ ವಿಚಾರ ತೆಗೆದುಕೊಂಡು ಸಭೆ ನಡೆಯದಂತೆ ಮಾಡುವುದೇ ಇವರ ಪ್ರತೀತಿಯಾಗಿದೆ. ಸಭೆಯಲ್ಲಿ ವಿಪಕ್ಷಗಳ ನಾಲ್ಕು ಮಂದಿಯೇ ಮಾತನಾಡಬೇಕು ಅವರ ಮಾತೇ ಎಲ್ಲರೂ ಕೇಳಬೇಕು ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ ಇದು ಸರಿಯಿಲ್ಲ. ಹಿರಿಯ ಸದಸ್ಯ ಎನಿಸಿಕೊಂಡವರು ಪ್ರತಿ ವಿಚಾರವನ್ನು ಅವರೊಬ್ಬರೇ ಮಾತನಾಡಬೇಕು ಎಂದು ಪ್ರಯತ್ನ ಮಾಡುತ್ತಾರೆ. ಸಭಾ ಗೌರವವೇ ಅವರಿಗೆ ತಿಳಿದಿಲ್ಲ. ಸಭೆ ರದ್ದಾಗುವಂತೆ ಮಾಡುವುದೇ ಇವರ ಉದ್ದೇಶ ಎಂದು ದೂರಿದರು.
ಸಭೆಯಲ್ಲಿ ಸ್ಥಾಯಿಸಮಿತಿ ಅಧ್ಯಕ್ಷೆ ಯಶೋದ ಮಂದಣ್ಣ, ಮುಖ್ಯಾಧಿಕಾರಿ ಚಂದ್ರಕುಮಾರ್, ಹಿರಿಯ ಅಭಿಯಂತರ ಹೇಮ್ ಕುಮಾರ್ , ಪುರಸಭೆ ಸರ್ವ ಸದಸ್ಯರು ಹಾಜರಿದ್ದರು.