ಮಡಿಕೇರಿ: ಕೊಡಗು ಪತ್ರಕರ್ತರ ಸಂಘ(ರಿ)ದ ವ್ಯಾಪ್ತಿಯ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮುಲ್ಲೇಂಗಡ ಮಧೋಶ್ ಪೂವಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉಷಾ ಪ್ರೀತಂ ಅವರನ್ನು ಆಯ್ಕೆ ಮಾಡಲಾಗಿದೆ.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರುಳೀಧರ್ ಅವರ ಅಧ್ಯಕ್ಷತೆಯಲ್ಲಿ ವಿರಾಜಪೇಟೆಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವ ಅಧ್ಯಕ್ಷರಾಗಿ ಡಿ.ಪಿ. ರಾಜೇಶ್, ಉಪಾಧ್ಯಕ್ಷರಾಗಿ ಖಲೀಲ್ ಸಿದ್ದಾಪುರ, ಖಜಾಂಚಿಯಾಗಿ ಮೋಹನ್ ರಾಜ್ ಅವರನ್ನು ನೇಮಕ ಮಾಡಲಾಯಿತು. ಉಳಿದಂತೆ ನಿರ್ದೇಶಕರಾಗಿ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಅಮ್ಮಣಿಚಂಡ ಪ್ರವೀಣ್ ಚೆಂಗಪ್ಪ, ಗುರುದರ್ಶನ್, ಅಂಚೆಮನೆ ಸುಧಿ, ಯುವರಾಜ್ ಕೃಷ್ಣ, ಸುರೇಶ್ ಬಿ.ಜೆ, ರೇವತಿ ಪೂವಯ್ಯ, ತೋರೇರ ಹೇಮಂತ್, ಸೈನುಲ್ಲಾ ಅವರನ್ನು ನಿರ್ದೇಶಕರಾಗಿ ಮಾಡಲಾಯಿತು.
ಸಭೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಮುರುಳೀಧರ್ ಮಾತನಾಡಿ ಮೊದಲ ಬಾರಿಗೆ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಉದ್ಘಾಟನೆಯಾಗಿದೆ. ಇದೀಗ ವಿರಾಜಪೇಟೆ ತಾಲೂಕು ಸಂಘದ ರಚನೆ ಮಾಡಲಾಗಿದ್ದು, ಜಿಲ್ಲಾ ಸಂಘಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ತಾಲೂಕು ಸಂಘಗಳಲ್ಲಿ ಕ್ರಿಯಾಶೀಲ ಕಾರ್ಯಕ್ರಮಗಳು ನಡೆದು ಜಿಲ್ಲಾ ಸಂಘದೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಂಘದ ಖಚಾಂಚಿ ಟಿ.ಕೆ. ಸಂತೋಷ್ ಮಾತನಾಡಿ ತಾಲೂಕು ಸಂಘದ ಬಲವರ್ಧನೆಯೊಂದಿಗೆ ಜಿಲ್ಲಾ ಸಂಘವನ್ನು ಮುನ್ನಡೆಸಲು ಒಟ್ಟಾಗಿ ಕೆಲಸ ಮಾಡೋಣ ಎಂದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಮಾತನಾಡಿ ಹಿರಿಯರು ಹಾಗೂ ಕಿರಿಯರು ಒಗ್ಗೂಡಿ ಉತ್ತಮವಾದ ಸ್ನೇಹಯುತವಾದ ಸಂಘ ರಚನೆಯಾಗಿದೆ ಎಂದರು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ ಈಗಾಗಲೇ ಕುಶಾಲನಗರ ತಾಲೂಕು ಸಂಘ ಉದ್ಘಾಟನೆಗೊಂಡಿದೆ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಸಭೆಯಲ್ಲಿ ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ಕೂರ್ಗ್, ಯುವರಾಜ್ ಕೃಷ್ಣ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.