ಮಡಿಕೇರಿ: ಜಿಲ್ಲೆಯ ಜನತೆ ಈ ಬಾರಿಯ ಚುನಾವಣೆಯಲ್ಲಿ ಕೆಆರ್ಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದಲ್ಲಿ ಕೊಡಗಿನಲ್ಲಿ ದಶಕಗಳಿಂದಲೂ ಇರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿ, ಉತ್ತಮ ಬದಲಾವಣೆ ನೀಡಲಾಗುವುದಾಗಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಜ್ಞಾನಸಿಂಧು ಸ್ವಾಮಿ ಹೇಳಿದರು.
ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಹದಗೆಟ್ಟಿದೆ, ಸರ್ಕಾರಿ ಕಚೇರಿಗಳಲ್ಲಿ ಸಕಾಲಕ್ಕೆ ಲಂಚ ನೀಡದಿದ್ದರೆ ಯಾವುದೇ ಕೆಲಸಗಳಾಗುತ್ತಿಲ್ಲ, ಬಡವರ ಪರವಾದ ಹಲವು ಯೋಜನೆಗಳು ಪ್ರಾಮಾಣಿಕವಾಗಿ ತಲುಪುತ್ತಿಲ್ಲ, ಬಹುತೇಕ ಕಡೆಗಳಲ್ಲಿ ಬೆಟ್ಟ-ಗುಡ್ಡ ಕುಸಿದ ಜಾಗದಲ್ಲಿ ಅವೈಜ್ಞಾನಿ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇದರಿಂದ ಪ್ರಕೃತಿಕ ವಿಕೋಪ, ಗುಡ್ಡ ಕುಸಿತ, ಮಣ್ಣಿನ ಸವಕಳಿ, ವಾತಾವಣದಲ್ಲಿ ಏರುಪೇರು ಕಂಡುಬರುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ರಾಜ್ಯಾದ್ಯಂತ ಪಕ್ಷದ ವತಿಯಿಂದ `ಕರುನಾಡು ಕಟ್ಟೋಣ’ ಅಭಿಯಾನದ ಪ್ರಾರಂಭವಾಗಿದ್ದು, ಜಿಲ್ಲೆಯ ಜನತೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಜೀರ್ ಎನ್.ಎಂ, ಕಾರ್ಯದರ್ಶಿ ಮಹದೇವಣ್ಣ, ಸದಸ್ಯ ನಿತೀಶ್ ಕುಮಾರ್, ಕೋಲರ ಯುವ ಘಟಕ ಕಾರ್ಯದರ್ಶಿ ಡೇನಿಯಲ್, ಪ್ರಮುಖ ಮಂಜುನಾಥ್ ಹಾಜರಿದ್ದರು.