ಮಡಿಕೇರಿ, ಸೆ.22: ಸುಣ್ಣ ಬಣ್ಣ ಬಳಿಯದೆ ಪಾಚಿ ಹಿಡಿದಿರುವ ಕಾವೇರಿ ಕಲಾಕ್ಷೇತ್ರಕ್ಕೆ ದಸರಾ ಜನೋತ್ಸವದ ಹೆಸರಿನಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದ್ದು, ತಕ್ಷಣ ಈ ಕಾರ್ಯವನ್ನು ಸ್ಥಗಿತಗೊಳಿಸಿ ಮೊದಲು ಸುಣ್ಣ ಬಣ್ಣ ಬಳಿಯಬೇಕೆಂದು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.
ಕಾವೇರಿ ಕಲಾಕ್ಷೇತ್ರಕ್ಕೆ ಭೇಟಿ ನೀಡಿದ್ದ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಹಾಗೂ ಪದಾಧಿಕಾರಿಗಳು ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದೀಗ ಅಳವಡಿಸಿರುವ ವಿದ್ಯುತ್ ದೀಪಗಳನ್ನು ತೆರವುಗೊಳಿಸಿ ಸುಣ್ಣ ಬಣ್ಣ ಬಳಿಯದಿದ್ದಲ್ಲಿ ಸೆ.24 ರಿಂದ ಕಾವೇರಿ ಕಲಾಕ್ಷೇತ್ರದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಅಭಿವೃದ್ಧಿ ಕಾರ್ಯಗಳಿಗಾಗಿ ನಗರಸಭೆಗೆ ಸರ್ಕಾರದಿಂದ ಕೋಟ್ಯಾಂತರ ರೂ. ಅನುದಾನ ಬರುತ್ತದೆ. ಆದರೆ ನಗರದ ಹೃದಯ ಭಾಗದಲ್ಲಿರುವ ಕಾವೇರಿ ಕಲಾಕ್ಷೇತ್ರವನ್ನು ಅಭಿವೃದ್ಧಿ ಪಡಿಸದೆ ಕಡೆಗಣಿಸಲಾಗಿದೆ. ವಿದ್ಯುತ್ ದೀಪಾಲಂಕಾರದ ಮೂಲಕ ಕಲಾಕ್ಷೇತ್ರದ ಅವ್ಯವಸ್ಥೆಯನ್ನು ಮರೆಮಾಚುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕನಿಷ್ಠ ಸುಣ್ಣ ಬಣ್ಣ ಬಳಿಯಲು ಕೂಡ ಹಣವಿಲ್ಲದ ಹೀನಾಯ ಸ್ಥಿತಿಯಲ್ಲಿ ನಗರಸಭೆ ಇದೆಯೇ ಎಂದು ಪ್ರಶ್ನಿಸಿದರು.
ನಗರದಲ್ಲಿ ನೂರಾರು ಮಂದಿ ಕಲಾಪ್ರತಿಭೆಗಳಿದ್ದಾರೆ, ಇವರುಗಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ಸಭಾಂಗಣದ ಕೊರತೆ ಇದೆ. ಕಾವೇರಿ ಕಲಾಕ್ಷೇತ್ರ ಅವ್ಯವಸ್ಥೆಗಳಿಂದ ಕೂಡಿದ್ದು, ಅತ್ಯಂತ ಶೋಚನೀಯ ಸ್ಥಿತಿಯಲ್ಲಿದೆ. ನೂತನ ಕಲಾಕ್ಷೇತ್ರವನ್ನು ನಿರ್ಮಿಸುವ ಜವಾಬ್ದಾರಿ ಹೊರಬೇಕಾಗಿರುವ ನಗರಸಭೆ ದಸರಾ ಸಂದರ್ಭದಲ್ಲಿ ಸುಣ್ಣ ಬಣ್ಣ ಬಳಯುವಲ್ಲಿಯೂ ವಿಫಲವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ಜನರು ವಿಜೃಂಭಣೆಯ ದಸರಾ ಸಂಭ್ರಮದಲ್ಲಿದ್ದಾರೆ, ಆದರೆ ನಗರಸಭೆ ಮಾತ್ರ ಕಳಾಹೀನ ವಾತಾವರಣದಲ್ಲಿ ದಸರಾ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ. ಇದನ್ನು ಖಂಡಿಸಿ ಶನಿವಾರ ಧರಣಿ ಆರಂಭಿಸುವುದಾಗಿ ಪೀಟರ್ ತಿಳಿಸಿದ್ದಾರೆ.
ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎಂ.ಯಾಕುಬ್, ನಗರ ಉಪಾಧ್ಯಕ್ಷ ಎಂ.ಇ.ಫಾರುಕ್, ಸಂಘಟನಾ ಕಾರ್ಯದರ್ಶಿ ರೆಹಮಾನ್ ಖಾನ್ ಹಾಗೂ ಖಜಾಂಚಿ ಎಂ.ಹೆಚ್.ಅಝಿಜ್ ಈ ಸಂದರ್ಭ ಹಾಜರಿದ್ದರು.