ಕುಶಾಲನಗರ: ಇಲ್ಲಿಗೆ ಸಮೀಪದ ಹಾರಂಗಿ ಜಲಾಶಯದಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅತ್ತೂರು ಅರಣ್ಯಕ್ಕೆ ಬಿಡಲಾಗಿದೆ.
ಹಾರಂಗಿ ಜಲಾಶಯದಲ್ಲಿ ಹೆಬ್ಬಾವು ತಡರಾತ್ರಿ ಕಾಣಿಸಿಕೊಂಡಿತ್ತು. ಇದನ್ನು ನೋಡಿದ ಸಿಬ್ಬಂದಿಗಳು ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಪ್ರವೀಣ್ ಮತ್ತು ಸ್ನೇಕ್ ಉದಯ್ ಅವರು ಹಾರಂಗಿ ಜಲಾಶಯದ ಸಿಬ್ಬಂದಿಗಳ ಸಹಕಾರದೊಂದಿಗೆ ಸುಮಾರು 15 ಅಡಿ ಉದ್ದ ಮತ್ತು 40 ಕೆಜಿ ತೂಕದ ಹೆಬ್ಬಾವನ್ನು ಅರಣ್ಯಾಧಿಕಾರಿಗಳ ಸೂಚನೆಯ ಮೇರೆಗೆ ಸೆರೆ ಹಿಡಿದಿದ್ದಾರೆ. ಸೆರೆ ಹಿಡಿದ ಹಾವನ್ನು ಬಳಿಕ ಅತ್ತೂರು ಅರಣ್ಯಕ್ಕೆ ಸುರಕ್ಷಿತ ವಾಗಿ ಬಿಡಲಾಯಿತು. ಈ ಸಂದರ್ಭ ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ ಮತ್ತು ಸಿಬ್ಬಂದಿ ಹಾಜರಿದ್ದರು.
ಹಾರಂಗಿ ಪ್ರವಾಸಿ ಮಂದಿರದ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಆತಂಕಕ್ಕೊಳಗಾಗಿದ್ದು, ಇಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಮನವಿ ಮಾಡಿದ್ದಾರೆ.