ಕೊಡಗು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರು, ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಕಾಂಕ್ಷೆ ವ್ಯಕ್ತಪಡಿಸಿ ಕಳೆದ ಎರಡು ವರ್ಷದಿಂದ ಟಿಕೆಟಿಗಾಗಿ ಪ್ರಯತ್ನಿಸಿದ್ದ ಮೈಸೂರಿನ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಪ್ರಭಾವಿ ಒಕ್ಕಲಿ ಗೌಡ ನಾಯಕ ಡಾ. ಸುಶ್ರುತ್ ಗೌಡ ಇಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.
ಚುನಾವಣೆಗೆ ಇನ್ನು ಎರಡು ದಿನಗಳಿರುವಾಗ ಸುಶ್ರುತ್ ಗೌಡ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷ ಶಾಕ್ ಗೆ ಒಳಗಾಗಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಅರೆ ಭಾಷೆ ಗೌಡರು ಹಾಗೂ ಒಕ್ಕಲಿ ಗೌಡ ಅವರನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಲವು ಕಡೆ ಪ್ರತ್ಯೇಕ ಪ್ರತ್ಯೇಕ ಸಭೆಗಳನ್ನು ನಡೆಸಿ ಬೆಂಬಲವನ್ನು ಕೋರಲಾಗಿತ್ತು.
ಕೊಡಗಿನಲ್ಲಿ ಕೂಡ ಗೌಡ ಫೆಡರೇಶನ್ ಪ್ರಮುಖರಾದ ಸೂರ್ತಲೆ ಸೋಮಣ್ಣನವರ ಮೂಲಕ ಸಭೆಯನ್ನು ನಡೆಸಲಾಗಿತ್ತು. ಇದೀಗ ಪ್ರಬಲ ಗೌಡ ನಾಯಕರಾದ ಸುಶ್ರುತ್ ಗೌಡ ಅವರ ಬಿಜೆಪಿ ಸೇರ್ಪಡೆಯಿಂದ ಅರೆ ಭಾಷೆ ಹಾಗೂ ಒಕ್ಕಲಿ ಗೌಡರ ಮತ ಸಂಪೂರ್ಣವಾಗಿ ಕಾಂಗ್ರೆಸ್ಸಿಗೆ ಸೆಳೆಯಲು ಯತ್ನಿಸಿದ್ದ ತಂತ್ರಗಾರಿಕೆ ಗೆ ಬ್ರೇಕ್ ಬಿದ್ದಂತೆ ಆಗಿದೆ.
ಇನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಪಕ್ಷದ ಸಂಕೇತ್ ಪೂವಯ್ಯ ನವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಎ.ಎಸ್ ಪೊನ್ನಣ್ಣನವರನ್ನು ಬೆಂಬಲಿಸಿ ಪಕ್ಷದ ಪರವಾಗಿ 11,000 ಮತಗಳನ್ನು ಪೊನ್ನಣ್ಣನವರ ಪಾಲಿಗೆ ದೊರಕಿಸಿಕೊಟ್ಟು ಅವರ ಗೆಲುವಿಗೆ ಕಾರಣವಾಗಿದ್ದ ಸಂಕೇತ್ ಪೂವಯ್ಯ ಇದೀಗ ಲೋಕಸಭಾ ಚುನಾವಣೆಯಲ್ಲಿ ತಟಸ್ಥ ನಿಲುವು ತಾಳಿದ್ದರಿಂದ, ಹಾಗೆ ಹಲವು ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರುಗಳು ತಟಸ್ಥವಾಗಿ ಉಳಿದುಕೊಂಡು ಪಕ್ಷದ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳದ್ದರಿಂದ ಚುನಾವಣೆಯ ಕೊನೆಗಳಿಗೆಯಲ್ಲಿ ಪಕ್ಷ ಹಿನ್ನಡೆ ಸಾಧಿಸುವ ಬಗೆ ಆತಂಕ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.