ಮಡಿಕೇರಿ: ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಬಿಜೆಪಿ ಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ. ಒಬ್ಬೊಬ್ಬರೇ ಪಕ್ಷ ತ್ಯಜಿಸುತ್ತಿದ್ದಾರೆ. ಅದೇ ರೀತಿ ಬಿಜೆಪಿ ನಾಯಕ ರೇಣುಕಾಚಾರ್ಯ ಕೂಡ ಪಕ್ಷದ ಹೈಕಮಾಂಡ್ ವಿರುದ್ಧ ಆಗಾಗ್ಗೆ ಹೇಳಿಕೆ ನೀಡುತ್ತಿದ್ದಾರೆ.
ಇದೀಗ ಸಚಿವ ಭೋಸರಾಜು ಹೇಳಿಕೆಯೊಂದನ್ನು ನೀಡಿದ್ದು, ರೇಣುಕಾಚಾರ್ಯ ಸೇರಿದಂತೆ ಬಿಜೆಪಿಯ ಹಲವು ನಾಯಕರು ನನ್ನನ್ನು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ರೇಣುಕಾಚಾರ್ಯ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಎಷ್ಟು ಮಂದಿ ನಾಯಕರು ಮಾತನಾಡಿದ್ದಾರೆ ಎಂದು ಈಗಲೇ ಹೇಳುವುದಿಲ್ಲ ಎಂದು ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಖಾಲಿ ಕುಳಿತಿರುವುದರಿಂದ ಆದಾಯ ತೆರಿಗೆ ದಾಳಿ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಿಸಿದೆ. ಅದರ ಬಗ್ಗೆ ಮಾತನಾಡದೇ ಸುಮ್ಮನೇ ಆರೋಪಿಸುತ್ತಿದ್ದಾರೆ. ಅವರು ನಮ್ಮ ಬಗ್ಗೆ ಏನು ಆರೋಪ ಮಾಡಿದ್ದಾರೆಯೋ ಅದನ್ನು ಅವರ ಇದುವರೆಗೂ ಮಾಡಿಕೊಂಡು ಬಂದಿದ್ದು ಎಂದು ತಿಳಿಸಿದರು.