ಮಡಿಕೇರಿ, ಡಿ.28: ಪ್ರಾಣಿ ದಯಾ ಸಂಘದ ವಾರ್ಷಿಕ ಮಹಾಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಗೋಶಾಲೆ ತೆರೆಯಲು ಭೂಮಿ ಕಾಯ್ದಿರಿಸಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಪಶುಪಾಲನೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.
ಈ ಕುರಿತು ಮಾಹಿತಿ ನೀಡಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನಾಗವಾರ ಗ್ರಾಮದ 1/1 ಸರ್ವೇ ನಂಬರಿನಲ್ಲಿ 40 ಎಕರೆ ಗೋಮಾಳ ಜಾಗವಿದ್ದು, ಅದನ್ನು ಕಾಯ್ದಿರಿಸಬೇಕಾಗಿ ಕೋರಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ಕರ್ನಾಟಕ ಜಾನುವಾರು ಪ್ರತಿಬಂಧಕ ಹಾಗೂ ಸಂರಕ್ಷಣಾ ನಿಯಮ ಅನುಷ್ಠಾನ, ತಾಲ್ಲೂಕು ಪ್ರಾಣಿ ಮಿತ್ರ ಮಂಡಳಿ ರಚನೆ, ಪ್ರಾಣಿ ಸಹಾಯಕರ ಮತ್ತು ಪ್ರಾಣಿ ರಕ್ಷಕರನ್ನು ನೇಮಿಸುವುದು, ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಕಾಯ್ದೆ ಮತ್ತು ನಿಯಮಗಳ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಿ ಗೋಶಾಲೆ ನಿರ್ವಹಣೆ ಮಾರ್ಗದರ್ಶಿ ನಿಯಮಗಳು, ನಿರ್ವಹಣಾ ಸಮಿತಿ, ಒಣ ಹುಲ್ಲು ಖರೀದಿ, ಪುಣ್ಯಕೋಟಿ ದತ್ತು ಯೋಜನೆ ಅನುಷ್ಠಾನ ಮತ್ತಿತರ ವಿಷಯಗಳ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸಂಯೋಜಕರಾದ ರಶ್ಮಿ ಡಿಸೋಜ ಅವರು ಮಾತನಾಡಿ ಕೊಡಗು ಜಿಲ್ಲೆಯು ರಾಜ್ಯದ ಗಡಿ ಪ್ರದೇಶ ಹೊಂದಿರುವುದರಿಂದ ಗಡಿಭಾಗದಲ್ಲಿ ಗೋ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಮನವಿ ಮಾಡಿದರು.
ಚಿಕ್ಕತೋಳೂರು ಕೃಷ್ಣ ಗೋಶಾಲೆಯ ಹರೀಶ್ ಆಚಾರ್ಯ ಅವರು ಗೋವುಗಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಗೋಶಾಲೆಯಲ್ಲಿ 62 ಜಾನುವಾರುಗಳು ಇವೆ ಎಂದು ಅವರು ಮಾಹಿತಿ ನೀಡಿದರು. ಖಾಸಗಿಯಾಗಿ ಗೋಶಾಲೆ ನಿರ್ವಹಣೆ ಮಾಡುವವರಿಗೂ ಸರ್ಕಾರದ ದರದಂತೆ ಹಣ ಭರಿಸುವಂತಾಗಬೇಕು ಎಂದು ಅವರು ಕೋರಿದರು.
ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಅವರು ಜಾನುವಾರು ಸಂರಕ್ಷಣೆ ಮತ್ತು ಗೋಶಾಲೆ ಆರಂಭ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ಪ್ರಾಣಿದಯಾ ಸಂಘದ ಉಪಾಧ್ಯಕ್ಷರಾದ ಡಾ.ಕೆ.ಪಿ.ಅಯ್ಯಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಎನ್.ಮಧುರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಯ್ಯ, ಶಿವಶಂಕರ್, ಪಶುಪಾಲನಾ ಇಲಾಖೆಯ ಪಾಲಿಕ್ಲೀನಿಕ್ ವಿಭಾಗದ ಉಪ ನಿರ್ದೇಶಕರಾದ ಡಾ.ಚಿದಾನಂದ, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ(ಮಡಿಕೇರಿ), ಬಾದಾಮಿ(ಸೋಮವಾರಪೇಟೆ), ಶ್ರೀದೇವು(ಕುಶಾಲನಗರ), ಡಾ.ಶಾಂತೇಶ್(ಪೊನ್ನಂಪೇಟೆ), ಡಾ.ನವೀನ್ ಕುಮಾರ್ (ವಿರಾಜಪೇಟೆ), ಪೊಲೀಸ್ ಇನ್ಸ್ಪೆಕ್ಟರ್ ಮೇದಪ್ಪ, ಅನೂಪ್ ಮಾದಪ್ಪ, ನಗರಸಭೆ ಎಂಜಿನಿಯರ್ ಸೌಮ್ಯ, ರಂಜಿತ್ ಕವಲಪಾರ ಇತರರು ಇದ್ದರು.