ಮಡಿಕೇರಿ: ಸಮಾಜ ಸೇವೆ ಮಾಡುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಅವಕಾಶಗಳಿದ್ದು, ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಸೇವೆಯಲ್ಲಿ ಆಸಕ್ತಿ ತೋರಬೇಕೆಂದು ಲಯನ್ಸ್ ಕ್ಲಬ್ ನ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಎಸ್.ಮಂಜುನಾಥ್ ಮೂರ್ತಿ ಕರೆ ನೀಡಿದ್ದಾರೆ.
ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಮಡಿಕೇರಿ ಲಯನ್ಸ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜ ಸೇವೆಯಲ್ಲಿ ಯುವ ಪೀಳಿಗೆ ಮುಂಚೂಣಿಯಲ್ಲಿರಬೇಕು. ಲಯನ್ಸ್ ಕ್ಲಬ್ ಗೆ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಬೇಕು. ಸದಸ್ಯತ್ವವನ್ನು ಹೆಚ್ಚು ಮಾಡಿ ಕ್ಲಬ್ ನ್ನು ಸಂಘಟಿಸುವ ಮೂಲಕ ಸಮಾಜ ಸೇವೆಯನ್ನು ವಿಸ್ತಾರಗೊಳಿಸಬೇಕೆಂದು ಸಲಹೆ ನೀಡಿದರು.
ನೂತನ ಅಧ್ಯಕ್ಷೆಯಾಗಿ ಲ| ಕನ್ನಂಡ ಕವಿತಾ ಕಾವೇರಮ್ಮ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿ, ಹಿಂದಿನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಇದೀಗ ನನ್ನ ನೇತೃತ್ವದ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕೆಲಸಗಳಿಗೆ ಎಲ್ಲಾ ಸದಸ್ಯರು ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ನಟರಾಜ ಕೆಸ್ತೂರು, ಎಲ್ಲಾ ಸದಸ್ಯರು ನನಗೆ ನಿರೀಕ್ಷೆಗೂ ಮೀರಿ ಸಹಕಾರ ನೀಡಿದ ಕಾರಣ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದರು. ಮುಂದಿನ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರತಿಭಾ ಪುರಸ್ಕಾರ :
ಹೆಚ್ಚು ಅಂಕ ಗಳಿಸಿದ ಹತ್ತನೇ ತರಗತಿ ವಿದ್ಯಾರ್ಥಿನಿ ಸಪ್ನ ಎಂ.ಶೇಟ್, ಪಿಯುಸಿ ವಿದ್ಯಾರ್ಥಿಗಳಾದ ವಿಹಾನ್ ಎಂ.ನಿರಂಜನ್ ಹಾಗೂ ಪಿ.ತುಳಸಿ ದೇಚಮ್ಮ ಅವರುಗಳಿಗೆ ಲಯನ್ಸ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಹಿಂದಿನ ಸಾಲಿನ ಲಯನ್ಸ್ ಸದಸ್ಯರುಗಳಿಗೆ ನಿರ್ಗಮಿತ ಅಧ್ಯಕ್ಷ ನಟರಾಜ ಕೆಸ್ತೂರು ಅವರು ನೆನಪಿನ ಕಾಣಿಕೆಗಳನ್ನು ನೀಡಿ ಅಭಿನಂದಿಸಿದರು.
ಲ| ನವೀನ್ ಅಂಬೆಕಲ್ ಪ್ರಾರ್ಥಿಸಿ, ನಟರಾಜ್ ಕೆಸ್ತೂರು ಸ್ವಾಗತಿಸಿ, ಲ| ಕೆ.ಮಧುಕರ್ ಪರಿಚಯಿಸಿ, ನೂತನ ಕಾರ್ಯದರ್ಶಿ ಲ| ಪಿ.ಪಿ.ಸೋಮಣ್ಣ ವಂದಿಸಿದರು.
ಲ| ಅನಿತಾ ಸೋಮಣ್ಣ, ಪಾಂತೀಯ ಅಧ್ಯಕ್ಷ ಶಾಶ್ವತ್ ಬೋಪಯ್ಯ, ವಲಯ ಅಧ್ಯಕ್ಷರುಗಳಾದ ಮೋಹನ್ ಕುಮಾರ್, ಹರೀಶ್, ವಿನಯ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಪ್ರಮಾಣ ವಚನ :
ಕನ್ನಂಡ ಕವಿತಾ ಕಾವೇರಮ್ಮ, ಚಾಮ, ಕಮಲ ಮುರುಗೇಶ್, ಕೋಟಿ ಜೆ.ವಿ., ಬೊಳ್ಳಪ್ಪ ಕೆ.ಎ., ಮೋಹನ್ ದಾಸ್ ಬಿ.ವಿ, ಬಾಬುಚಂದ್ರ ಉಳ್ಳಗಡ್ಡಿ, ಕೆ.ಕೆ.ದಾಮೋದರ್, ಅಗಸ್ಟಿನ್ ಜಯರಾಜ್, ಗೀತಾ ಮಧುಕರ್, ಜಯಶೀಲ ಪ್ರಕಾಶ್, ಅರುಣ್ ಮೋಹನ್ ಕುಮಾರ್, ಎಂ.ಎ.ನಿರಂಜನ್, ಅಂಬೆಕಲ್ ನವೀನ್, ಬೇಬಿ ಮ್ಯಾಥ್ಯು, ನಟರಾಜ ಕೆಸ್ತೂರು, ಡಿ.ಜಿ.ಕಿಶೋರ್, ಮಧುಕರ್ ಶೇಟ್ ಕೆ. ಹಾಗೂ ಸೋಮಣ್ಣ ಪಿ.ಪಿ. ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.