ಶ್ರೀಮಂಗಲ: ಮಡಿಕೇರಿ ನಗರಸಭೆ ಸದಸ್ಯ ಅಪ್ಪಣ್ಣ ಅವರ ಮೇಲೆ ನಡು ರಸ್ತೆಯಲ್ಲಿ ಹಾಡಹಗಲು ಹಲ್ಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಜಿಲ್ಲೆಯಿಂದ ಗಡಿಪಾರು ಮಾಡಬೇಕು ಹಾಗೂ ದುಷ್ಕರ್ಮಿಗಳು ನಡೆಸುತ್ತಿರುವ ಹೋಟೆಲ್ ಅನುಮತಿ ಪತ್ರವನ್ನು ನಗರಸಭೆ ಕೂಡಲೇ ರದ್ದುಗೊಳಿಸಬೇಕೆಂದು ಜಬ್ಬೂಮಿ ಸಂಘಟನೆ ಸಂಚಾಲಕ ಚೊಟ್ಟೆಕ್’ಮಾಡ ರಾಜೀವ್ ಬೋಪಯ್ಯ ಒತ್ತಾಯಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು ಶಾಂತಿ ಹಾಗೂ ಸಾಮರಸ್ಯದ ಜಿಲ್ಲೆಯಾಗಿರುವ ಕೊಡಗಿನಲ್ಲಿ ಜನಪ್ರತಿನಿಧಿಗಳ ಮೇಲೆಯೇ ಹಲ್ಲೆ ನಡೆಸುವುದಾದರೆ ಜನಸಾಮಾನ್ಯ ಗತಿಯೇನು ಎಂದು ರಾಜೀವ್ ಗೋಪಿಯ ಪ್ರಶ್ನೆಸಿದರು.
ಮುಂದಿನ ದಿನಗಳಲ್ಲಿ ಇಂಥ ದುಷ್ಕರ್ಮಿಗಳು ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿ ಪೊಲೀಸರು ಹಾಗೂ ಸೇನೆಯ ಮೇಲೆ ವಿದ್ವಂಸಕ ಕೃತ್ಯ ಮಾಡುವಂತೆ ಇಲ್ಲಿಯೂ ನಡೆಸಬಹುದು ಇಂಥವರ ಮೇಲೆ ಪೊಲೀಸ್ ಇಲಾಖೆ ಮೃದು ಧೋರಣೆ ತಳೆಯದೇ ಕಠಿಣ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದರು.
ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಡಿದ್ದರೆ ಆತನ ವಿರುದ್ಧ ಕೊಡವ ಸಮಾಜ ಇತರ ಸಂಘ-ಸಂಸ್ಥೆ , ಚೇಂಬರ್ ಆಫ್ ಕಾಮರ್ಸ್, ಹೋಟೆಲ್ ಮಾಲೀಕರ ಸಂಘಗಳೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆದು ಏನು ಕ್ರಮ ಕೈಗೊಳ್ಳಬೇಕೆಂದು ಚಿಂತಿಸಲಾಗುವುದು. ದುಷ್ಕರ್ಮಿಗಳನ್ನು ಪೊಲೀಸ್ ಅಧಿಕಾರಿಗಳು ಬೆಂಬಲಿಸಿದರೇ ಅಂತವರ ಮೇಲೆ ಏನು ಕ್ರಮ ಕೈಗೊಳ್ಳಬೇಕೆಂದು ಚಿಂತಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಇಂತಹ ದುಷ್ಕರ್ಮಿಗಳನ್ನು ಹಗುರವಾಗಿ ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ಇಂತಹ ಹಲವಾರು ದುಷ್ಕರ್ಮಿಗಳು ಹುಟ್ಟಿಕೊಳ್ಳುತ್ತಾರೆ ಎಂದು ಅವರು ಎಚ್ಚರಿಸಿದರು.
ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಮಂಚಳ್ಳಿ ಮತ್ತು ನಾಲ್ಕೇರಿ ಗ್ರಾಮದಲ್ಲಿ ಬೆಳೆಗಾರರಿಬ್ಬರ ಮೇಲೆ ಕೋತೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣವನ್ನು ಪೋಲಿಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿತ್ತು. ಪೊನ್ನಂಪೇಟೆಯಲ್ಲಿ ಮನೆಗೆ ನುಗ್ಗಿ ಕೋವಿ ಅಪಹರಿಸಿರುವ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಇಂತಹ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದರೆ ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಾದಕ ವಸ್ತು ಸರಬರಾಜು ವಿರುದ್ಧ ಪೊಲೀಸ್ ಇಲಾಖೆ ಈಗ ಕ್ರಮಕ್ಕೆ ಮುಂದಾಗಿರುವುದು ಸ್ವಾಗತ,ಇದನ್ನು ಇನ್ನಷ್ಟು ಕಠಿಣವಾಗಿ ನಿಯಂತ್ರಿಸಲು ವಿಶೇಷ ದಳ ರಚಿಸಲು ಮನವಿ ಮಾಡಿದರು.
ಮಡಿಕೇರಿ ಪ್ರಕರಣದಲ್ಲಿ ಕಾನೂನಿನಡಿ ಕಠಿಣ ಸೆಕ್ಸನ್ ಹಾಕಿ ಕ್ರಮಕೈಗೊಳ್ಳದಿದ್ದರೆ, ಎಲ್ಲಾ ಸಂಘ ಸಂಸ್ಥೆಗಳ ಬೆಂಬಲ ಪಡೆದು ಹೋರಾಟ ನಡೆಸಲಾಗುವುದೆಂದು ಅವರು ಎಚ್ಚರಿಸಿದರು.
ಗೋಷ್ಠಿಯಲ್ಲಿ ಜಬ್ಬೂಮಿ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ,ಸದಸ್ಯರಾದ ಮಲ್ಲಮಾಡ ಪ್ರಭು ಪೂಣಚ್ಚ,ಮಚ್ಚಮಾಡ ಅನೀಶ್ ಮಾದಪ್ಪ ಹಾಜರಿದ್ದರು.