ಮಡಿಕೇರಿ ಆ.29 : ಕೊಡಗಿನಲ್ಲಿ ಎರಡು ತಿಂಗಳ ಕಾಲ ಸುರಿದ ಧಾರಾಕಾರ ಮಳೆಗೆ ಕೃಷಿಕ ವರ್ಗ ಭಾರೀ ನಷ್ಟ ಅನುಭವಿಸಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತಕ್ಷಣ ಸರ್ಕಾರ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಹಾಮಳೆಗೆ ಗುಡ್ಡ ಕುಸಿತ ಮತ್ತು ಪ್ರವಾಹ ಏರ್ಪಟ್ಟಾಗ ಸರ್ಕಾರದ ಸಚಿವರುಗಳು ಜಿಲ್ಲೆಗೆ ಭೇಟಿ ನೀಡಿದ್ದು ಬಿಟ್ಟರೆ ಇಲ್ಲಿಯವರೆಗೆ ಕೃಷಿಕರಿಗೆ ಪರಿಹಾರವನ್ನು ನೀಡಿಲ್ಲ. ಬೆಳೆ ಕೊಳೆ ರೋಗಕ್ಕೆ ತುತ್ತಾಗಿದ್ದರೂ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಕೊಡಗು ವಾಣಿಜ್ಯ ಬೆಳೆಗಳ ಮೂಲಕ ರಾಜ್ಯ ಮತ್ತು ದೇಶಕ್ಕೆ ಆರ್ಥಿಕ ಶಕ್ತಿಯನ್ನು ತುಂಬುತ್ತಿದೆ. ನಾಡಿನ ಜನ ಕಾವೇರಿ ನದಿ ನೀರಿನ ಲಾಭ ಪಡೆಯುತ್ತಿದ್ದಾರೆ. ಆದರೆ ಮಳೆಗಾಲದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕುವ ಜಿಲ್ಲೆಯ ಬೆಳೆಗಾರರ ನೆರವಿಗೆ ಸರ್ಕಾರ ಬರುತ್ತಿಲ್ಲ. ಸಚಿವರುಗಳು ಬಂದಂತೆ ಮಾಡಿ ಮರಳುತ್ತಿದ್ದಾರೆಯೇ ಹೊರತು ಇದರಿಂದ ಮಳೆಹಾನಿ ಸಂತ್ರಸ್ತರಿಗೆ ಯಾವುದೇ ಲಾಭವಾಗಿಲ್ಲ.
ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವಿರೋಧ ಪಕ್ಷದೊಂದಿಗೆ ರಾಜಕೀಯ ಪೈಪೋಟಿಗಿಳಿದಿದೆ. ಆ ಮೂಲಕ ಜಿಲ್ಲೆಗೆ ಬರಬೇಕಾದ ಪರಿಹಾರದ ಕುರಿತು ಜನರ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ನಿರಂತರ ಮಳೆ, ಗುಡ್ಡ ಕುಸಿತ, ಪ್ರವಾಹ ಮತ್ತು ವನ್ಯಜೀವಿಗಳ ದಾಳಿಯಿಂದ ತೋಟಗಳು ನೆಲಕಚ್ಚಿವೆ.
ಸರ್ಕಾರ ಅಲ್ಪ ಪ್ರಮಾಣದ ಪರಿಹಾರ ನೀಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಒಟ್ಟು ಬೆಳೆನಷ್ಟದ ಕುರಿತು ಸಮೀಕ್ಷೆ ನಡೆಸಿ ವರದಿ ನೀಡಲು ರಾಜ್ಯ ಸರ್ಕಾರ ಕೊಡಗು ಜಿಲ್ಲೆಗೆ ತಜ್ಞರ ವಿಶೇಷ ತಂಡವನ್ನು ಕಳುಹಿಸಿಕೊಡಬೇಕು. ಪ್ರಾಕೃತಿಕ ವಿಕೋಪದಿಂದ ಬೆಳೆಗಾರರು ನಷ್ಟ ಅನುಭವಿಸಿದಾಗ ಆದ ನಷ್ಟದಷ್ಟೇ ಪ್ರಮಾಣದ ಪರಿಹಾರ ನೀಡಲು ಪ್ರತ್ಯೇಕವಾಗಿ “ರೈತರ ಮಳೆಹಾನಿ ಪರಿಹಾರ ನಿಧಿ”ಯನ್ನು ಸ್ಥಾಪಿಸಿ ಅನುದಾನ ಮೀಸಲಿಡಬೇಕು ಎಂದು ಫ್ಯಾನ್ಸಿ ಬೆಳ್ಯಪ್ಪ ಒತ್ತಾಯಿಸಿದ್ದಾರೆ.