ಕೊಡಗು: ಸುಳುಗೋಡು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಪ್ರಕರಣವನ್ನು ಪೊನ್ನಂಪೇಟೆ ಠಾಣೆ ಪೊಲೀಸರು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಪೊನ್ನಂಪೇಟೆ ವ್ಯಾಪ್ತಿಯ ಬೆಸಗೂರು ಗ್ರಾಮದ ಜಯಂತಿ ಕಾಲೋನಿಯ ನಿವಾಸಿ ಹೆಚ್.ಆರ್. ಕಿರಣ (37) ಯುವಕರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.
ಸುಳುಗೋಡು ಗ್ರಾಮದ ತನ್ನ ತಾಯಿಯ ಹೆಸರಿನಲ್ಲಿರುವ ಕಾಫಿ ತೋಟದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಡಿ.ಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ತೋಟದಲ್ಲಿ ಬೆಳೆದಿದ್ದ 4 ಗಾಂಜಾ ಗಿಡಗಳ ಸಮೇತ, ಆರೋಪಿ ಕಿರಣನನ್ನು ಬಂಧಿಸಿದ್ದಾರೆ.
ಈ ಹಿಂದೆಯೂ ಗಾಂಜಾ ಮಾರಾಟ ಆರೋಪದಡಿ ಈತನ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಎಸ್ಪಿ ಕ್ಷಮಾ ಮಿಶ್ರಾ, ವೀರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಹಾಗೂ ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಡಿ.ಕುಮಾರ್, ಎಎಸ್ಐ ಉದಯಕುಮಾರ್, ಎಎಸ್ಐ ಗಣಪತಿ, ಸಿಬ್ಬಂದಿಗಳಾದ ಸತೀಶ್, ಮಹದೇಶ್ವರ ಸ್ವಾಮಿ, ಜೀವನ್, ಮಹೇಂದ್ರ, ಮಂಜುನಾಥ್, ಲೋಕೇಶ್, ಮನು, ಹರೀಶ್, ಚಲವರಾಜು, ಪ್ರಮೀಳಾ, ಶೋಭಾ ಹಾಗೂ ಚಾಲಕ ಮಹೇಶ್ ಪಾಲ್ಗೊಂಡಿದ್ದರು.