ಮಡಿಕೇರಿ, ಸೆ.21: ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೆ.24ರಂದು ಎ.ಪಿ.ಸಿ.ಎಂ.ಎಸ್ ಸಭಾಂಗಣದಲ್ಲಿ ನಡೆಯಲಿದೆ.
ಕೊಡಗು ಪತ್ರಕರ್ತರ ಸಂಘ(ರಿ)ದ ಅಧ್ಯಕ್ಷ ಮುರುಳೀಧರ್ ಅಧ್ಯಕ್ಷತೆ ವಹಿಸಲಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕೊಡಗು ಪತ್ರಕರ್ತರ ಸಂಘದ ಗೌರವ ಸಲಹೆಗಾರರಾದ ಬಿ.ಜಿ.ಅನಂತಶಯನ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಜಿಲ್ಲಾಡಳಿತದ ಕಾನೂನು ಸಲಹೆಗಾರರಾದ ಎ.ಲೋಕೇಶ್ ಕುಮಾರ್ ಪ್ರಮಾಣ ವಚನ ಬೋಧಿಸಲಿದ್ದಾರೆ. ಕೃತಗ್ಯತಾ ಟ್ರಸ್ಟ್ ನ ಮುರುಳೀಧರ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷ ವಿಘ್ನೇಶ್ ಎಂ. ಭೂತನಕಾಡು, ಮುಖ್ಯ ಅತಿಥಿಗಳಾಗಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯ ವರ್ಧನ್, ಮಡಿಕೇರಿಯ ಆಲ್ಫಾ ಟೆಕ್ನಾಲಜಿಯ ಹೆನ್ರಿಕ್ ಮಾರ್ಟಿನ್, ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿತ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘಕ್ಕೆ ಕುಶಾಲನಗರ ಜ್ಞಾನಗಂಗಾ ಶಾಲೆಯ ಮುಖ್ಯಸ್ಥರಾದ ರಾಮು ದೇವಯ್ಯ ಅವರು ರು.25 ಸಾವಿರ ರುಪಾಯಿ ದತ್ತಿ ಪ್ರಶಸ್ತಿ ನೀಡಿದ್ದಾರೆ. ಪ್ರತಿ ವರ್ಷ ತಾಲೂಕಿನ ಹಿರಿಯ ಪತ್ರಕರ್ತರಿಗೆ ಈ ದತ್ತಿ ಪ್ರಶಸ್ತಿ ನೀಡಲು ತಾಲೂಕು ಸಂಘದಿಂದ ನಿರ್ಧರಿಸಲಾಗಿದೆ.
ತಾಲ್ಲೂಕಿನ ಸದಸ್ಯರ ಮಕ್ಕಳಾದ ಮಧುರ ಬಿ.ಡಿ, ಅಹನ್ ಪೂಜಾರಿ, ಆರ್ಯ, ದೀಪಿಕಾ, ಯದುನಂದ್, ಭುವಿತ್, ಬೆನಕ್, ಸೋವಿತಾ, ಹರ್ಷಿತ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಕುಶಾಲನಗರ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆಂಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.