ಚೆಟ್ಟಳ್ಳಿ: ಕೇಂದ್ರೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಚೆಟ್ಟಳ್ಳಿವತಿಯಿಂದ ಸೆಪ್ಟಂಬರ್20ರ ಮಂಗಳವಾರದಂದು ಕೋತೂರು ಸಮೀಪದ ಬೊಮ್ಮಾಡು ಗಿರಿಜನ ಆಶ್ರಮ ಶಾಲೆಯಲ್ಲಿ ಬುಡಕಟ್ಟು ಉಪಯೋಜನೆಯಡಿ ಅಣಬೆ ಬೇಸಾಯದ ಕುರಿತು ಸಾಮರ್ಥ್ಯ ಬಲವರ್ಧನೆ ಹಾಗು ಸಂಪನ್ಮೂಲ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ಪರಿಶಿಷ್ಟ ಪಂಗಡದವರನ್ನು ಗುರುತಿಸಿ ವಿವಿಧ ತರಬೇತಿಗಳೊಂದಿಗೆ ಸಾಮರ್ಥ್ಯ ಬಲವರ್ಧ ಮಾಡುವುದು ಹಾಗೂ ಸಂಪನ್ಮೂಲಗಳನ್ನು ವಿತರಿಸಿ ಅವರ ಆದಾಯ ಹೆಚ್ಚಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಬೊಮ್ಮಾಡು ಗಿರಿಜನ ಆಶ್ರಮ ಶಾಲೆಯ ಶಿಕ್ಷಕಿ ಆರತಿ ಸರ್ವರನ್ನೂ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಆರಂಭಿ ಸಲಾಯಿತು. ಶಾಲಾಮಕ್ಕಳು ಪ್ರಾರ್ಥನಾ ಗೀತೆಯನ್ನು ಹಾಡಿದರು.
ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕಾರಿ ಗುರುಶಾಂತಪ್ಪ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು. ಚೆಟ್ಟಳ್ಳಿಯ ತೋಟಗಾರಿಕಾ ವಿಜ್ಞಾನಿ ಡಾ. ಮುರಳೀಧರ ಬಿ ಎಂ ಮಾತನಾಡಿ, ಸ್ಥಳೀಯರಿಗೆ ಹಾಗೂ ಮಕ್ಕಳಿಗೆ ಸವಾಲಾಗಿರುವ ಅಪೌಷ್ಠಿಕತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಹಣ್ಣುಗಳ ಪಾತ್ರ ಬಹುಮುಖ್ಯ ವೆಂದರು.
ಕಾರ್ಮಿಕ ಇಲಾಖೆಯಿಂದ ಆಗಮಿಸಿದ್ದ ಸಿರಾಜ್ಅಹ್ಮದ್ರವರು ಬಾಲ್ಯದಲ್ಲಿ ಶಿಕ್ಷಣದ ಮಹತ್ವ, ಬಾಲ ಕಾರ್ಮಿಕರು, ಕಿಶೋರಕಾರ್ಮಿಕರು, ಬಾಲಕಾರ್ಮಿಕರ ತಿದ್ದುಪಡಿ ಕಾಯ್ದೆ, ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ಟ್ರೈಕೋಡೆರ್ಮಾ (ಜೈವಿಕ ಪೀಡೆನಾಶಕ) ಹಾಗೂ ಅಣಬೆಬೇಸಾಯದ ಬಗ್ಗೆ ಚೆಟ್ಟಳ್ಳಿಯ ಸಸ್ಯರೋಗ ವಿಜ್ಞಾನಿ ಮಧುರವರು ತರಬೇತಿ ನೀಡಿದರು. ಸ್ಥಳೀಯರು ಲಾಭದಾಯಕ ಅಣಬೆ ಬೇಸಾಯವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದೆಂದು, ಅಣಬೆಬೇಸಾಯದ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಫಲಾನುಭವಿಗಳಿಗೆಲ್ಲಾ 6ಬಗೆಯ 30 ಹಣ್ಣಿನ ಗಿಡಗಳು, 5 ಕೆ.ಜಿ. ಟ್ರೈಕೋಡೆರ್ಮಾ ಹಾಗೂ 1/2 ಕೆ.ಜಿ ಅಣಬೆ ಬೀಜವನ್ನು ವಿತರಿಸಲಾಯಿತು. ಬೊಮ್ಮಾಡು,ಕಾನೂರು, ನಾಲ್ಕೇರಿ ಹಾಗೂ ಬಾಡಗದಿಂದ 100 ಕ್ಕೂ ಹೆಚ್ಚು ಫಲಾನು ಭವಿಗಳು ಆಗಮಿಸಿ, ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮುವ್ಮೆಂಟ್ನ ಸದಸ್ಯರು ಭಾಗಿ ಯಾಗಿದ್ದರು. ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.