ಮಡಿಕೇರಿ: ಸರ್ಕಾರದ ಸವಲತ್ತುಗಳನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಜವಾಬ್ದಾರಿ ನನ್ನದು, ಒಂದು ಚಿಕ್ಕಸು ಹಣವು ಕೂಡ ದುರುಪಯೋಗವಾಗದಂತೆ ಬಡವರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಡವರಿಗೆ ತಲುಪುವಂತೆ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ ಎಸ್ ಪೊನ್ನಣ್ಣನವರು ಹೇಳಿದರು.
ಅವರು ಗೋಣಿಕೊಪ್ಪಲ್ಲಿನಲ್ಲಿ ನಡೆದ ಅಸಂಘಟಿತ ವಲಯ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುತ್ತೇನೆ, ಈ ಬಗ್ಗೆ ಪ್ರಣಾಳಿಕೆಯಲ್ಲೂ ಕೂಡ ನಾನು ಪ್ರಕಟಿಸಿದ್ದೇನೆ ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಇದೆ, ಮಹಿಳೆಯರ ಅಭಿವೃದ್ಧಿಗಾಗಿ ಮಾಸಿಕ 2000 ಅನ್ನು, ವಿದ್ಯಾರ್ಥಿಗಳ ಜೀವನ ಮಟ್ಟವನ್ನು ಸುಧಾರಿಸಲು ಉಚಿತ ವಿದ್ಯುತ್ ಹಾಗೂ ನೆರವು ಯೋಜನೆಗಳು,ಇವೆಲ್ಲವೂ ಗ್ಯಾರೆಂಟಿ ಕಾರ್ಡ್ ನೊಂದಿಗೆ ನಿಮ್ಮ ಮನೆಗೆ ಸೇರಿದೆ. ನಿಮ್ಮ ನಿಮ್ಮ ಖಾತೆಗೆ ನೇರವಾಗಿ ಈ ಹಣ ಸಂದಾಯವಾಗುತ್ತದೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆಯ ಅಗತ್ಯತೆಯನ್ನು ಎಲ್ಲರೂ ಅರಿತುಕೊಂಡಿದ್ದಾರೆ.
ಒಂದು ಬಾರಿ ನನಗೆ ಸೇವೆ ಮಾಡಲು ಅವಕಾಶ ಮಾಡಿಕೊಡಿ, ಸಮಾನತೆಯ ಸಮೃದ್ಧ ಬಾಳ್ವೆಯನ್ನು ನಿಮಗೆ ನೀಡುತ್ತೇನೆ. ಜಾತಿ ಮತ ಧರ್ಮದಿಂದ ಹೊರತಾಗಿ ಎಲ್ಲರ ನೋವು ನಲುವಿಗೆ ಸ್ಪಂದಿಸಲು ನನಗೊಂದು ಅವಕಾಶ ಮಾಡಿಕೊಡಿ ಎಂದು ಈ ಸಂದರ್ಭ ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ ಹೋಬಳಿ ಅಧ್ಯಕ್ಷ ನವೀನ್ ಮತ್ತಿತರು ಉಪಸ್ಥಿತರಿದ್ದರು.