ಮಡಿಕೇರಿ: ಎ.ಎನ್.ಎಂ ಶುಶ್ರೂಷಕ ತರಬೇತಿ ಪಡೆದಿದ್ದರೂ ನಿರುದ್ಯೋಗದ ಸಮಸ್ಯೆ ಎದುರಾಗಿದ್ದು, ತಕ್ಷಣ ಉದ್ಯೋಗ ನೀಡಬೇಕೆಂದು ತರಬೇತಿ ಪಡೆದ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ ಅಭ್ಯರ್ಥಿಗಳು, ನಿರುದ್ಯೋಗ ಸಮಸ್ಯೆ ಕುರಿತು ವಿವರಿಸಿದರು. ಸ್ಥಳೀಯ ನಿವಾಸಿಗಳಾದ ನಾವುಗಳು ಕೂಲಿ ಕಾರ್ಮಿಕ ಕುಟುಂಬದಿಂದ ಬಂದವರಾಗಿದ್ದೇವೆ. ಉದ್ಯೋಗ ಸಿಗುವ ನಿರೀಕ್ಷೆಯಲ್ಲಿ ಎ.ಎನ್.ಎಂ ಶುಶ್ರೂಷಕ ತರಬೇತಿ ಪಡೆದಿದ್ದೇವೆ. ಆದರೆ ಇದೀಗ ಉದ್ಯೋಗವಿಲ್ಲದೆ ಜೀವನ ದುಸ್ತರವಾಗಿದ್ದು, ಕುಟುಂಬ ನಿರ್ವಹಣೆ ಅಸಾಧ್ಯವಾಗಿದೆ. ಆದ್ದರಿಂದ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಉದ್ಯೋಗ ನೀಡುವ ಮೂಲಕ ಸಹಕರಿಸುವಂತೆ ಮನವಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರವಿಗೌಡ, ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಪಡೆದಿದ್ದರೂ ನಿರುದ್ಯೋಗಿಗಳಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡತನದಲ್ಲಿ ಜೀವನ ಸಾಗಿಸುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸಲಾಗಿದೆ. ಆಡಳಿತ ವ್ಯವಸ್ಥೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆರೋಗ್ಯ ಸಚಿವರ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸುವುದಾಗಿ ತಿಳಿಸಿದ ಅವರು, ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ವೇದಿಕೆಯ ತಾಲ್ಲೂಕು ಅಧ್ಯಕ್ಷ ನಾಗೇಶ್, ಸದಸ್ಯರುಗಳಾದ ಆಕಾಶ್, ಕಿರಣ್, ಪುನೀತ್, ಎ.ಎನ್.ಎಂ ಅಭ್ಯರ್ಥಿಗಳಾದ ಬೇಬಿ, ಫಾತಿಮ, ಪವನ, ಭಾಗ್ಯಶ್ರೀ, ಸಹಾನ, ಗೀತಾ, ರೀನಾ, ಸೋನಿಯಾ, ಶಾರದ, ಜಶೀಲಾ ಮನವಿ ನೀಡುವ ಸಂದರ್ಭ ಹಾಜರಿದ್ದರು.