ಮಡಿಕೇರಿ: ರಾಸುಗಳಲ್ಲಿ ಚರ್ಮ ಗಂಟು ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ನುರಿತ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿದಲ್ಲಿ ರಾಸುಗಳು ಮರಣ ಹೊಂದುವುದನ್ನು ತಪ್ಪಿಸಬಹುದು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಡಾ.ಸುರೇಶ್ ಭಟ್ ಅವರು ತಿಳಿಸಿದ್ದಾರೆ.
ನಗರದ ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ರಾಸುಗಳಲ್ಲಿ ಚರ್ಮ ಗಂಟು ರೋಗದ ಸಂಬಂಧ ಮಾಹಿತಿ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಯಾವುದೇ ಚರ್ಮಗಂಟು ರೋಗ ಇದುವರೆಗೆ ಪತ್ತೆ ಆಗಿಲ್ಲ. ಪಕ್ಕದ ಜಿಲ್ಲೆಗಳಾದ ಹಾಸನ, ಮೈಸೂರು ಜಿಲ್ಲೆಗಳಲ್ಲಿ ಚರ್ಮ ಗಂಟು ರೋಗ ಪತ್ತೆಯಾಗಿದೆ. ಈ ರೋಗವು ಅತಿ ವೇಗವಾಗಿ ಹರಡುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಅತಿಯಾದ ಜ್ವರ ಮತ್ತು ನಿಶ್ಯಕ್ತಿ, ಕಾಲು ಊತ ಮತ್ತು ಕುಂಟುವುದು, ಕಣ್ಣುಗಳಿಂದ ನೀರು ಸೋರುವುದು, ರಾಸುಗಳ ಚರ್ಮದ ಮೇಲೆ ಗುಳ್ಳೆ ಕಾಣಿಸಿಕೊಂಡು ನಂತರ ಹೊಡೆದು ಗಾಯವಾಗುವುದು, ಹಾಲಿನ ಇಳುವರಿ ಕಡಿಮೆಯಾಗುವುದು ಹಾಗೂ ಕೆಲವು ಸಂದರ್ಭಗಳಲ್ಲಿ ಗರ್ಭಪಾತವಾಗುವುದು ಚರ್ಮಗಂಟು ರೋಗದ ಲಕ್ಷಣವಾಗಿದೆ.
ರೋಗಗ್ರಸ್ಥ ರಾಸುಗಳನ್ನು ಆರೋಗ್ಯವಂತ ದನಗಳಿಂದ ಬೇರ್ಪಡಿಸಿ ಕೂಡಲೇ ವೈದ್ಯರಿಂದ ಸೂಕ್ತ ಚಿಕಿತ್ಸೆಗೆ ಒಳಪಡಿಸಬೇಕು. ದನದ ಕೊಟ್ಟಿಗೆಯಲ್ಲಿ ಸೊಳ್ಳೆ, ನೊಣ, ಮತ್ತು ಉಣ್ಣೆಗಳನ್ನು ನಿಯಂತ್ರಿಸಬೇಕು, ಗಾಯಗಳ ಸೂಕ್ತ ಉಪಚಾರ ಹಾಗೂ ಖನಿಜ ಮಿಶ್ರಣ, ರೋಗ ನಿರೋಧಕ ಶಕ್ತಿ ವರ್ಧಕ ಔಷಧಿಗಳನ್ನು ಬಳಸುವುದರಿಂದ ಜಾನುವಾರುಗಳು ನಿಶ್ಯಕ್ತವಾಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.
ರೋಗಗ್ರಸ್ಥ ರಾಸುಗಳು ಚೇತರಿಸಿಕೊಳ್ಳಲು ಕನಿಷ್ಟ 2 ರಿಂದ 3 ವಾರಗಳ ಚಿಕಿತ್ಸೆ ಅಗತ್ಯ. ರೋಗ ತೀವ್ರಗೊಂಡ ಸಂದರ್ಭದಲ್ಲಿ ಮೇಕೆ ಸಿಡಿಬು ಲಸಿಕೆಯನ್ನು ಬಳಸಿ, ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ಪಶು ವೈದ್ಯರ ಸಲಹೆ ಮೇರೆಗೆ ಸೂಕ್ತ ಸೋಂಕು ನಿವಾರಕಗಳಾದ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ನಿರ್ದಿಷ್ಟ ಪ್ರಮಾಣದಲ್ಲಿ ದನದ ಕೊಟ್ಟಿಗೆಗಳಲ್ಲಿ ಸಿಂಪಡಿಸಿ ಸ್ವಚ್ಛಗೊಳಿಸಬೇಕು ಎಂದು ಅವರು ತಿಳಿಸಿದರು.