ಮಡಿಕೇರಿ. ಸೆ.6: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆ ನಗರದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ನಾಮಫಲಕಗಳ ಸ್ವಚ್ಛತಾ ಕಾರ್ಯ ಕೊಡವ ಮಕ್ಕಡ ಕೂಟದಿಂದ ನಡೆಯಿತು.
ಕೊಡವ ಮಕ್ಕಡ ಕೂಟ ಅಳವಡಿಸಿದ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ರಸ್ತೆ, ಕೊಂಗಂಡ ಗಣಪತಿ ಬೀದಿ, ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ ರಸ್ತೆ ನಾಮಫಲಕಗಳನ್ನು ಶುಚಿಗೊಳಿಸಿ ಬಣ್ಣ ಬಳಿಯಲಾಯಿತು. 1965ರ ಯುದ್ಧದಲ್ಲಿ ವೀರ ಮರಣಹೊಂದಿ ಮರಣೋತ್ತರ ಮಹಾವೀರ ಚಕ್ರ ಪುರಸ್ಕೃತ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಆವರಣಕ್ಕೆ ಬಣ್ಣ ಬಳಿಯಲಾಯಿತು.
ಹಿರಿಯ ಸಾಧಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಯುವ ಪೀಳಿಗೆಗೆ ಮಾದರಿಯಾಗಿರಬೇಕು ಮತ್ತು ಅವರ ಸಾಧನೆಯನ್ನು ಗುರುತಿಸುವ ಕಾರ್ಯವಾಗಬೇಕು ಎನ್ನುವ ಉದ್ದೇಶದಿಂದ ಕೊಡವ ಮಕ್ಕಡ ಕೂಟ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದರು.