ಕುಶಾಲನಗರ, ಡಿ.10: 10.12.2022ರಂದು ಸೈನಿಕ ಶಾಲೆ ಕೊಡಗಿನಲ್ಲಿ 2022-23ನೇ ಸಾಲಿನ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದಿತು. ಈ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿನ ದೈಹಿಕ ಸಾಮರ್ಥ್ಯ, ಸ್ವಯಂ ಪ್ರೇರಣೆ, ಸಾಂಘಿಕ ಹೋರಾಟ ಮತ್ತು ದೃಢತೆಯನ್ನು ಸಾದರಪಡಿಸುವುದಾಗಿದೆ.
ಈ ಸ್ಪರ್ಧೆಗೆ ಮುಖ್ಯ ಅತಿಥಿಗಳಾಗಿ ಕರ್ನಲ್ ಇಂದ್ರನೀಲ್ ಘೋಷ್ರವರು ಆಗಮಿಸಿದ್ದರು. ಪ್ರಸ್ತುತ ಸ್ಪರ್ಧೆಯಲ್ಲಿ ವಿಭಾಗ- ಎ, ಬಿ, ಸಿ, ಡಿ, ಇ ಮತ್ತು ಎಫ್ ಎಂಬ ಆರು ವಿಭಾಗಗಳಿದ್ದವು. ‘ಎ’ ವಿಭಾಗದಲ್ಲಿ ಹನ್ನೊಂದು ಮತ್ತು ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿದ್ದರೆ, ‘ಬಿ’ ವಿಭಾಗದಲ್ಲಿ ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು, ‘ಸಿ’ ವಿಭಾಗದಲ್ಲಿ ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳು, ‘ಡಿ’ ವಿಭಾಗದಲ್ಲಿ ಆರನೇ ತರಗತಿಯ ವಿದ್ಯಾರ್ಥಿಗಳು, ‘ಇ’ ವಿಭಾಗದಲ್ಲಿ ಒಂಭತ್ತರಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿನಿಯರು, ಕೊನೆಯದಾಗಿ ‘ಎಫ್’ ವಿಭಾಗದಲ್ಲಿ ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ‘ಎ’ ವಿಭಾಗಕ್ಕೆ 09 ಕಿ ಮೀ, ‘ಬಿ’ ವಿಭಾಗಕ್ಕೆ 07 ಕಿ ಮೀ, ‘ಸಿ’ ವಿಭಾಗಕ್ಕೆ 05 ಕಿ ಮೀ, ‘ಡಿ’ ವಿಭಾಗಕ್ಕೆ 04 ಕಿ ಮೀ ಹಾಗೂ ‘ಇ’ ವಿಭಾಗಕ್ಕೆ 04 ಕಿ ಮೀ ಹಾಗೂ ‘ಎಫ್’ ವಿಭಾಗಕ್ಕೆ 04 ಕಿ ಮೀ ದೂರವನ್ನು ನಿಗದಿಪಡಿಸಲಾಗಿದ್ದಿತು. ಪ್ರಸ್ತುತ ಸ್ಪರ್ಧೆಯಲ್ಲಿ ಶಾಲೆಯ ಸುಮಾರು 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್ರವರು ಧ್ವಜದ ನಿಶಾನೆಯನ್ನು ತೋರಿಸುವುದರ ಮೂಲಕ ಸ್ಪರ್ಧೆಗೆ ಚಾಲನೆಯನ್ನು ನೀಡಿದರು.
ಈ ಸ್ಪರ್ಧೆಯಲ್ಲಿ ‘ಎ’ ವಿಭಾಗದಿಂದ ಕೆಡೆಟ್ ದರ್ಶನ್ ಎಂ ಪಿ, ‘ಬಿ’ ವಿಭಾಗದಿಂದ ಕೆಡೆಟ್ ಪ್ರಜ್ವಲ್, ‘ಸಿ’ ವಿಭಾಗದಿಂದ ಕೆಡೆಟ್ ಸೋಹಮ್, ‘ಡಿ’ ವಿಭಾಗದಿಂದ ಕೆಡೆಟ್ ಆರ್ಯನ್ ಮಾರ್ವಕ್ರರ್ ‘ಇ’ ವಿಭಾಗದಿಂದ ಕೆಡೆಟ್ ಮಾನ್ಯ ‘ಎಫ್’ ವಿಭಾಗದಿಂದ ಕೆಡೆಟ್ ಅನ್ವಿ ಹಾಗೂ ‘ಜಿ’ ವಿಭಾಗದಿಂದ ಕೆಡೆಟ್ ದೀಪ್ತಿ ದೇವಿ ಪ್ರಥಮ ಸ್ಥಾನವನ್ನು ಪಡೆದರು. ಒಟ್ಟಾರೆಯಾಗಿ ಶಾಲೆಯ ಸುಬ್ರತೋ ನಿಲಯವು 2022-23ನೇ ಸಾಲಿನ ಗುಡ್ಡಗಾಡು ಓಟ ಸ್ಪರ್ಧೆಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಮುಖ್ಯ ಅತಿಥಿಗಳಾದ ಕರ್ನಲ್ ಇಂದ್ರನೀಲ್ ಘೋಷ್ ಹಾಗೂ ಸ್ವಾತಿ ಘೋಷ್ ಸ್ಪರ್ಧೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ವಿತರಿಸಿದರು. ಹಾಗೆಯೇ ವಿಜೇತ ನಿಲಯವಾದ ಸುಬ್ರತೋ ನಿಲಯಕ್ಕೆ 2022-23ನೇ ಸಾಲಿನ ಗುಡ್ಡಗಾಡು ಓಟ ಸ್ಪರ್ಧೆಯ ‘ಚಾಂಪಿಯನ್ ಪಾರಿತೋಷಕ’ವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್ರವರು ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು. ಹಾಗೆಯೇ ಪ್ರಸ್ತುತ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತೋರಿದ ಅಸಾಧಾರಣ ಸಾಮರ್ಥ್ಯವನ್ನು ಪ್ರಶಂಸಿಸಿದರು. ಜೊತೆಗೆ ವಿದ್ಯಾರ್ಥಿಗಳು ಬೌದ್ಧಿಕ ವಿಕಸನಕ್ಕೆ ತೋರುವ ಆಸಕ್ತಿಯನ್ನು ತಮ್ಮ ದೈಹಿಕ ಸಾಮರ್ಥ್ಯದ ವೃದ್ಧಿಗೂ ನೀಡಿ, ಉತ್ತಮ ಆರೋಗ್ಯವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳು ಎಲ್ಲಿಯೂ ಆಯಾಸಗೊಂಡು ಸ್ಪರ್ಧೆಯಿಂದ ವಿಮುಖರಾಗದೆ ತೋರಿದ ಅಸಾಧಾರಣ ಸಾಮರ್ಥ್ಯವು ಸ್ಮರಣಾರ್ಹವಾಗಿದೆ ಎಂದರು. ಇದರೊಂದಿಗೆ ಸಾಂಘಿಕ ಹೋರಾಟದ ಮೂಲಕ ತಮ್ಮ ನಿಲಯದ ಅಂಕಗಳನ್ನು ಹೇಗೆ ಹಚ್ಚಳ ಮಾಡಬಹುದೆಂಬುದಕ್ಕೆ ಈ ಸ್ಪರ್ಧೆಯು ನಿದರ್ಶನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ವಾತಿ ಘೋಷ್, ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಜಿ ಕಣ್ಣನ್, ಆಡಳಿತಾಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ಸಿಂಗ್, ಉಪ ಪ್ರಾಂಶುಪಾಲರಾದ ಸ್ಕಾಡ್ರನ್ ಲೀಡರ್ ಮನ್ಪ್ರೀತ್ ಸಿಂಗ್, ವೈದ್ಯಾಧಿಕಾರಿಗಳಾದ ಸುಜಾತ, ಹಿರಿಯ ಶಿಕ್ಷಕರಾದ ಎನ್ ವಿಬಿನ್ ಕುಮಾರ್, ಬೋಧಕ, ಬೋಧಕೇತರ ವರ್ಗ, ಎನ್ ಸಿ ಸಿ ಸಿಬ್ಬಂದಿವರ್ಗ, ಸಾಮಾನ್ಯ ಸಿಬ್ಬಂದಿ ವರ್ಗ ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.