ಕುಶಾಲನಗರ ಡಿ.10: ಕೊಡಗು ಜಿಲ್ಲೆಯಲ್ಲಿ ಸಾಹಿತ್ಯ ಪೂರಕ ಚಟುವಟಿಕೆಗಳು ನಿರಂತರವಾಗಿ ಜರುಗುತ್ತಿರುವುದು ಸಂತಸ ತಂದಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.
ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಉದಯೋನ್ಮುಖ ಮಹಿಳಾ ಲೇಖಕಿ ಹಾಗೂ ಶಿಕ್ಷಕಿ ಮಾಲಾದೇವಿ ಮೂರ್ತಿ ಅವರು ಹೊರತಂದ ” ನಿಧಿ ಮುಗಿಯದ ಅಂಗೈಯಲ್ಲಿ ” ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ನಾವು ಬರೆದ ಕಾವ್ಯಗಳು ಜನಮನ ತಲುಪಿದರಷ್ಟೇ ಸಾಕು ಅದೇ ಮಹಾಕಾವ್ಯ ವಾಗುತ್ತದೆ. ಕನ್ನಡ ಭಾಷೆಯಲ್ಲಿ ಸಾಕಷ್ಟು ಕವನ ಸಂಕಲನ, ಕಥೆ, ಕಾದಂಬರಿಗಳು ರಚನೆಯಾಗಿವೆ. ಅನೇಕ ಕವಿಗಳು ತಮ್ಮ ಭಾವನೆಗಳನ್ನು ಅಕ್ಷರ ರೂಪದಲ್ಲಿ ಹೊರತಂದು ಕನ್ನಡದ ಸಾರಸ್ವತ ಲೋಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ ಲೇಖಕರ ಮತ್ತು ಬರಹಗಾರರ ಬಳಗವನ್ನು ಕಟ್ಟುವ ಮೂಲಕ ಸಾಹಿತಿಗಳನ್ನು ಗುರುತಿಸುವ ಕೆಲಸವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಕಾಮತ್ ಅವರು, ಕೊಡಗು ಜಿಲ್ಲೆಯಲ್ಲಿ ಮಹಿಳಾ ಬರಹಗಾರರು ಹೆಚ್ಚಾಗಿ ಉದಯಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕವನ ಸಂಕಲನ ಬಿಡುಗಡೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಟಿ.ಪಿ.ರಮೇಶ್, ಮಾತನಾಡಿ, ಭಾವನೆಗಳು ತುಂಬಿದ ಕವಿತೆಗಳು ಇದರಲ್ಲಿದೆ. ಪ್ರತಿಯೊಂದು ಪ್ರಾಸ ಬದ್ಧ ಹಾಗೂ ಲಯ ಬದ್ದವಾಗಿದ್ದು, ಓದುಗರ ಮನ ಮುಟ್ಟುವಲ್ಲಿ ಯಶಸ್ವಿಯಾಗಲಿದೆ. ಕವಿಯ ಕವಿತೆಗಳು ಭಾವಗೀತೆಗಳಾಗಿ ಸಮಾಜದಲ್ಲಿ ಬೆಳಕು ಚೆಲ್ಲಿದರಷ್ಟೇ ಸಾಕು. ಅದು ಕೃತಿಕಾರರಿಗೆ ಸಲ್ಲುವ ಬಹು ದೊಡ್ಡ ಗೌರವ ಎಂದು ರಮೇಶ್ ಹೇಳಿದರು. ರಾಜಕೀಯ ಸ್ಥಿತ್ಯಂತರ, ಮಹಿಳೆಯರ ನೋವು ನಲಿವು, ಅಪ್ಪ ಎಂಬ ಜೀವದ ಬಗ್ಗೆ, ರೈತನ ಕುರಿತು ಹೀಗೆ ಸಮಾಜದ ಎಲ್ಲಾ ಮಜಲುಗಳ ಬಗ್ಗೆ ಕವಿತೆಗಳಲ್ಲಿ ಕವಿಯತ್ರಿ ಬೆಳಕು ಚೆಲ್ಲಿದ್ದಾರೆ ಎಂದು ಅವರು ಹೇಳಿದರು.
ಸಾಹಿತಿ ಕಣಿವೆ ಭಾರದ್ವಾಜ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಕವಿಗಳಿಗೆ ಕೊರತೆಯಿಲ್ಲದಿದ್ದರು ವಿಮರ್ಶಕರ ಕೊರತೆ ಇದೆ. ಸಾಹಿತಿಗಳಿಗೆ, ಕೃತಿಕಾರರಿಗೆ, ಹಾಗು ಬರಹಗಾರರ ಬಗ್ಗೆ ಕಾರ್ಯಾಗಾರದ ಅಗತ್ಯವನ್ನು ಸಾಹಿತ್ಯ ಪರಿಷತ್ತು ಮನಗಾಣಬೇಕಿದೆ ಎಂದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನದ ಕೃತಿಕಾರ್ತಿ ಮಾಲಾದೇವಿ ಮಾತನಾಡಿದರು.
ಈ ಸಂದರ್ಭ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾನ್ ಬೈಲು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಂ.ವಿ.ಮಂಜೇಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ರೇವತಿ ರಮೇಶ್, ನಿರ್ದೇಶಕ ಮಂಜುನಾಥ್, ಸೋಮವಾರಪೇಟೆ ಜೇಸೀ ಅಧ್ಯಕ್ಷೆ ಎಂ.ಎ.ರುಬೀನಾ, ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಶಿಕ್ಷಣ ಇಲಾಖೆಯ ಸಿಆರ್ ಪಿ ಶಾಂತಕುಮಾರ್, ಸಾಹಿತಿ ವಹಿದ್ ಜಾನ್, ಟಿ.ಜಿ.ಪ್ರೇಮಕುಮಾರ್, ಸದಾಶಿವ ಪಲ್ಲೇದ ಇದ್ದರು.
ಇದೇ ಸಂದರ್ಭ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಂದ ಸ್ವರಚಿತ ಕವನ ವಾಚನ ನಡೆಯಿತು. ಶಿಕ್ಷಕ ನಿರೂಪಿಸಿದರು. ಕೆ.ಮೂರ್ತಿ ಸ್ವಾಗತಿಸಿದರು.