ಮಡಿಕೇರಿ: ಕೊಡಗು ಗೌಡ ಸಮಾಜಗಳ ಸಹಕಾರದೊಂದಿಗೆ ಜೂ.27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮಡಿಕೇರಿಯಲ್ಲಿ ಆಚರಿಸಲಾಗುವುದೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೋಮಣ್ಣ ಸೂರ್ತಲೆ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಎಲ್ಲಾ ಗೌಡ ಸಮಾಜಗಳ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ನೀರಾವರಿ ಬಗ್ಗೆ ಅಪಾರ ಅರಿವು ಹೊಂದಿ ಶತಮಾನಗಳ ಹಿಂದೆ ರಾಜಕಾಲುವೆ, ಕೆರೆ-ಕಟ್ಟೆಗಳಿಗೆ ಆದ್ಯತೆ ನೀಡಿ ಪ್ರತಿಯೊಂದು ಜನಾಂಗಕ್ಕೂ ಗೌರವ ಮತ್ತು ಮಾನ್ಯತೆ ನೀಡುವುದರೊಂದಿಗೆ ಶತಮಾನಗಳ ದೂರದೃಷ್ಟಿ ಹೊಂದಿದ್ದು, ಬೆಂಗಳೂರು ಜಗದ್ವಿಖ್ಯಾತಿ ಹೊಂದಲು ಕಾರಣೀಭೂತರಾದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂ.27 ರಂದು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ಕೊಡಗಿನಲ್ಲೂ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಲಾಗುವುದು ಎಂದು ಸೋಮಣ್ಣ ಸೂರ್ತಲೆ ತಿಳಿಸಿದ್ದಾರೆ.