ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ ಹಾಗೂ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಬಾಹ್ಯ ಸೇವಾ ಕೇಂದ್ರ ಇವರ ವತಿಯಿಂದ ಎರಡು ದಿನಗಳ ಶ್ರವಣ ಸಾಧನ ವಿತರಣಾ ಶಿಬಿರಕ್ಕೆ ಶುಕ್ರವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇ ಗೌಡ ಅವರು ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರವಣ ಸಾಧನ ಉಪಕರಣ ಎಲ್ಲಾ ಕಡೆಯಲ್ಲೂ ಸಿಗುತ್ತದೆ. ಸಿಗುವ ಕಡೆ ಅದರ ಉಪಯೋಗವನ್ನು ಬಳಸಿಕೊಳ್ಳಬೇಕು. ಈ ದಿನ ಉಚಿತವಾಗಿ ಫಲಾನುಭವಿಗಳನ್ನು ಗುರುತಿಸಿ ಶ್ರವಣ ಉಪಕರಣ ನೀಡಲಾಗಿದೆ ಎಂದರು.
ಮಾನವನ ದೇಹದಲ್ಲಿ ಕಿವಿ, ಮೂಗು, ಗಂಟಲು ಅದರದೇ ಆದ ಪ್ರಾಮುಖ್ಯತೆ ಹೊಂದಿದೆ. ಇದರಲ್ಲಿ ಕಿವಿಯು ಅತ್ಯಂತ ಪ್ರಾಮುಖ್ಯವಾದ ಅಂಶ. ಕಿವಿ, ಮೂಗು, ಗಂಟಲು ಅಂಗಗಳನ್ನು ಜೋಪಾನವಾಗಿ ರಕ್ಷಣೆ ಮಾಡಿಕೊಳ್ಳಬೇಕಾದರೆ ಮುನ್ನೆಚ್ಚರ ವಹಿಸಬೇಕು. ಯಾವ ಶಬ್ದವನ್ನು ಆಲಿಸಬೇಕು ಎಂಬುದನ್ನು ತಿಳಿದಿರಬೇಕು. ಸರ್ಕಾರವು ಇತ್ತೀಚೆಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಯಾವ ಸ್ಥಳದಲ್ಲಿ ಯಾವ ರೀತಿಯಾದ ಶಬ್ದವನ್ನು ಯಾವ ಪ್ರಮಾಣದಲ್ಲಿ ಶಬ್ದ ಇರಬೇಕು ಮತ್ತು ಹೇಗೆ ಬಳಸಬೇಕು ಎನ್ನುವ ನಿಯಮವನ್ನು ಜಾರಿಗೆ ತಂದಿದೆ ಎಂದರು.
ನಾವು ವಾಸಿಸುವ ಪರಿಸರದಲ್ಲಿ, ಮನೆಯೊಳಗೆ ಶಬ್ದವನ್ನು ಮಿತಿಯೊಳಗೆ ಬಳಸುವಂತ ವ್ಯವಸ್ಥೆಯನ್ನು ರೂಡಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು. ಮನುಷ್ಯನಿಗೆ ನೈಸರ್ಗಿಕವಾಗಿ ಇರುವಂತಹ ಉಪಕರಣಗಳಾದ ಕಿವಿ, ಮೂಗು, ಗಂಟಲು ಯಾವುದೇ ಆದರೂ ಹೆಚ್ಚು ಹಾಳಾಗದ ರೀತಿ ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ಇಎನ್ಟಿ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ, ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಅಧೀಕ್ಷಕರಾದ ಡಾ.ರೂಪೇಶ್ ಗೋಪಾಲ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.