News Karnataka Kannada
Friday, May 03 2024
ಮಡಿಕೇರಿ

ಕೊಡಗು: ಗಾಂಧಿ ಸ್ಮಾರಕ ನಿರ್ಮಾಣಕ್ಕೆ ಜಿಲ್ಲಾ ಸರ್ವೋದಯ ಸಮಿತಿಯಿಂದ ಸಹಕಾರ

District Sarvodaya Samiti extends co-operation for construction of Gandhi Memorial
Photo Credit : News Kannada

ಕೊಡಗು: ಗಾಂಧಿ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಜಿಲ್ಲಾಡಳಿತದ ಮೂಲಕ ನಡೆಯಲಿರುವ ಕಾಮಗಾರಿಗೆ ಕೊಡಗು ಜಿಲ್ಲಾ ಸರ್ವೋದಯ ಸಮಿತಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸರ್ವೋದಯ ಸಮಿತಿಯ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಹಾತ್ಮಗಾಂಧಿ ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ. ನೀಡುವಂತೆ ಮನವಿ ಮಾಡಿತ್ತು. ಮೊದಲ ಹಂತದಲ್ಲಿ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಇದೀಗ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಮಡಿಕೇರಿಯ ಖಜಾನೆಯಲ್ಲಿ ಇಡಲಾಗುತ್ತಿರುವ ಗಾಂಧೀಜಿ ಅವರ ಚಿತಾಭಸ್ಮಕ್ಕೆ ಶಾಶ್ವತ ನೆಲೆ ಕಲ್ಪಿಸಬೇಕು ಮತ್ತು ಪ್ರವಾಸಿಗರಿಗೆ ಗಾಂಧಿ ಚರಿತ್ರೆ ಪರಿಚಯಿಸಬೇಕು ಎನ್ನುವ ಉದ್ದೇಶದೊಂದಿಗೆ ದಶಕದ ಹಿಂದೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದ ಬಲದೇವಕೃಷ್ಣ ಅವರು ಸ್ಮಾರಕ ನಿರ್ಮಾಣದ ಯೋಜನೆಯೊಂದನ್ನು ರೂಪಿಸಿದರು. ಆದರೆ ಅನುದಾನ ದೊರೆಯದೆ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಡಳಿತ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದರು.

ಸುಮಾರು 30 ಸೆಂಟ್ ಜಾಗದಲ್ಲಿ ಸುಸಜ್ಜಿತವಾದ ಮಹಾತ್ಮ ಗಾಂಧಿ ಸ್ಮಾರಕ ನಿರ್ಮಾಣಗೊಳ್ಳಲಿದ್ದು, ಇದು 1 ಕೋಟಿ ರೂ. ವೆಚ್ಚದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. ಗಾಂಧಿ ಕೊಡಗಿಗೆ ಬಂದು ಹೋದ ಚರಿತ್ರೆ, ಜೀವನದ ಪುಟಗಳು, ಹೋರಾಟದ ಹಾದಿ ಹೀಗೆ ಹಲವು ವಿಚಾರಧಾರೆಗಳನ್ನು ಪರಿಚಯ ಮಾಡುವ ಛಾಯಾಚಿತ್ರಗಳು ಮತ್ತು ಗ್ರಂಥಾಲಯ ಸ್ಮಾರಕದಲ್ಲಿ ಇರಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಗಾಂಧಿ ಸ್ಮಾರಕ ಇಂದಿನ ಯುವಪೀಳಿಗೆಗೆ ಅಧ್ಯಯನಕ್ಕೆ ಸಹಕಾರಿಯಾಗಿರಬೇಕು ಎಂದು ರಮೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಸಹ ಕಾರ್ಯದರ್ಶಿ ಕೆ.ಟಿ.ಬೇಬಿ ಮ್ಯಾಥ್ಯು, ಖಜಾಂಚಿ ಕಾನೆಹಿತ್ಲು ಮೊಣ್ಣಪ್ಪ ಹಾಗೂ ಸದಸ್ಯ ಲಿಯಾಕತ್ ಆಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು