ಮಡಿಕೇರಿ: ವರುಣನ ಅವಕೃಪೆ, ಹವಮಾನ ವೈಪರೀತ್ಯದ ಪರಿಣಾಮ ಮೂರ್ನಾಡು-ನಾಪೋಕ್ಲು ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಕಾಫಿ ಫಸಲು ಧರಾಶಾಹಿಯಾಗುತ್ತಿದೆ. ಇದೇ ರೀತಿ ಮುಂದುವರಿದ್ದಲ್ಲಿ ಈ ವ್ಯಾಪ್ತಿಯಲ್ಲಿ ಕಾಫಿ ಫಸಲು ಸಂಪೂರ್ಣವಾಗಿ ಬೆಳೆಗಾರರ ಕೈ ತಪ್ಪಿಹೋಗುವ ಆತಂಕ ಎದುರಾಗುವ ಸಂಭವವಿದೆ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಳೆದ ತಿಂಗಳು ಈ ಭಾಗಗಗಳಲ್ಲಿ ನಿರಂತರವಾಗಿ ಕೆಲ ದಿನಗಳು ಮಳೆ ಸುರಿದಿತ್ತು. ಪರಿಣಾಮ ಕಾಫಿ ಗಿಡಗಳಿಗೆ ಅಧಿಕ ನೀರು ದೊರೆಯಿತು. ನಂತರದ ದಿನಗಳಲ್ಲಿ ಕಂಡು ಬರುತ್ತಿರುವ ಬಿರು ಬಿಸಿಲು ಕಾಫಿ ಫಸಲಿಗೆ ಮಾರಕವಾಗಿದೆ. ಬಿಸಿಲಿಗೆ ಕಾಫಿ ಮತ್ತು ಕಾಳು ಮೆಣಸು ಫಸಲು ಅಧಿಕ ಪ್ರಮಾಣದಲ್ಲಿ ನೆಲಕ್ಕೆ ಉದುರುತ್ತಿದೆ. ಹಲವಾರು ಕಡೆ ಕಾಫಿ ಗಿಡಗಳಲ್ಲಿ ಶೇಕಡಾ 70 ಭಾಗ ಎಲೆಗಳು ಕೊಳೆತಿವೆ. ಹೀಗೆ ಮುಂದುವರಿದ್ದಲ್ಲಿ ಉಳಿದ ಫಸಲು ಉಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ.
ಕಾಫಿ ಗಿಡಗಳ ಬುಡದಲ್ಲಿ ಬಿದ್ದಿರುವ ಒಣ ಎಲೆಗಳನ್ನು ಹಲವಾರು ಬೆಳೆಗಾರರು ಸ್ವಚ್ಛ ಮಾಡುತ್ತಿರುವುದು ದೃಶ್ಯವಾಳಿಗಳು ಗೋಚರವಾಗಿದೆ. ಇದರಿಂದಾಗಿ ಗಿಡಗಳಿಗೆ ಅಧಿಕ ತೇವಾಂಶ ದೊರೆಯದೆ ಫಸಲು ಉದುರುವ ಪ್ರಮಾಣ ಕಡಿಮೆಯಾಗಲಿದೆ ಎಂಬುದು ಕೆಲ ಬೆಳೆಗಾರ ಅಭಿಪ್ರಾಯವಾಗಿದೆ.
ಮುಂಬರುವ ದಿನಗಳಲ್ಲಿ ಮಳೆ ಹೆಚ್ಚಾದಲ್ಲಿ ಶೇಕಡಾ 90ಕ್ಕೂ ಅಧಿಕ ಕಾಫಿ ಫಸಲು ಉದುರಿ ಹೋಗುವ ಸಂಭವವಿದೆ ಎನ್ನಲಾಗುತ್ತಿದೆ. ವಾಡಿಕೆಯಂತೆ ಮಳೆ ಬಾರದೇ ಇರುವುದರಿಂದ ಮಳೆಯು ಹಲವಾರು ತಿಂಗಳುಗಳ ಮುಂದುವರಿಯುವ ಸೂಚನೆ ಇದೆ. ಹಾಗೇನಾದರೂ ಆಗಿ ಮಳೆ ಅಧಿಕಗೊಂಡು ಮುಂದುವರಿದ್ದಲ್ಲಿ ಕಾಫಿ ಬೆಳೆಗಾರರು ಸಂಕಟ ಅನುಭವಿಸುವ ಸೂಚನೆಗಳು ಕಂಡುಬರುತ್ತಿವೆ.
ವಾಡಿಕೆಯಂತೆ ಆಟಿ ಮಾಸದಲ್ಲಿ ಬಿರು ಮಳೆಯಾಗುತ್ತಿತ್ತು. ಆದರೆ, ಈ ಬಾರಿ, ತೀರಾ ಅಪೂರ್ವ ಎನ್ನುವಂತೆ ಜಿಲ್ಲೆಯಲ್ಲಿ ಬಿರು ಬಿಸಿಲು ಕಾಣಿಸಿತ್ತು. ಇದರ ಪರಿಣಾಮವೇ ಕಾಫಿ ಮತ್ತು ಕಾಳು ಮೆಣಸಿನ ಮೇಲಾಗಿದೆ ಎಂದು ಈ ಭಾಗದ ಬೆಳೆಗಾರರು ವಿವರಣೆ ನೀಡಿರುವರು. ಉದುರಿರುವ ಕಾಫಿ ಫಸಲಿನ ಸಮೀಕ್ಷೆಯನ್ನು ತಕ್ಷಣ ಮಾಡದಿದ್ದಲ್ಲಿ ಉದುರಿದ ಎಳೆ ಕಾಫಿಯು ಮಳೆಯಿಂದ ಕರಗಿ ಹೋಗುವ ಸಂಭವವಿದೆ ಎನ್ನಲಾಗಿದೆ. ನಂತರ ಫಸಲಿನ ಸಮೀಕ್ಷೆ ನಡಸಿದ್ದಲ್ಲಿ ಉದುರಿ ಹೋಗಿರುವ ಕಾಫಿಯ ನಿಖರ ಪ್ರಮಾಣ ತಿಳಿಯಲಾರದು ಎಂಬ ಶಂಕೆ ವ್ಯಕ್ತವಾಗಿದೆ.
ಮಳೆ ಕಡಿಮೆಯಾಗಿದ್ದರೂ, ಕಾಫಿ ಫಸಲು ಉದುರುತ್ತಿರುವುದು ಬೆಳೆಗಾರರಿಗೆ ಭಾರೀ ಶಾಕ್ ನೀಡಿದಂತಾಗಿದೆ. ಈ ಬಗ್ಗೆ ಕಾಫಿ ಮಂಡಳಿ ಬೆಳೆಗಾರರ ತೋಟ ಪರಿಶೀಲನೆ ಮಾಡಬೇಕು. ನಷ್ಟದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಹಾಗಾದಲ್ಲಿ ಮಾತ್ರ ಬೆಳೆಗಾರರಿಗೆ ಪರಿಹಾರ ದೊರೆಯುವ ಸಂಭವವಿದೆ ಎಂದು ಹೊದ್ದೂರಿನ ಬೆಳೆಗಾರ ಚೆಟ್ಟಿಮಾಡ ಪ್ರಶಾಂತ್ ಅಭಿಪ್ರಾಯಿಸಿದ್ದಾರೆ.
ಅಧಿಕ ತರಗೆಲೆಗಳಿರುವ ತೋಟಗಳಲ್ಲಿ ಭಾರೀ ಪ್ರಮಾಣದ ಕಾಫಿ ಮತ್ತು ಕಾಳು ಮೆಣಸು ಫಸಲು ಉದುರಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ನಷ್ಟವನ್ನು ಅಂದಾಜಿಸಬೇಕು. ಸಮರ್ಪಕ ಅಂಕಿಅಂಶಗಳೊಡನೆ ಸರಕಾರಕ್ಕೆ ವರದಿ ಸಲ್ಲಿಸಬೇಕು. ಸಂಕಟದಲ್ಲಿರುವ ಬೆಳೆಗಾರರಿಗೆ ಸರಕಾರ ಸಹಾಯ ಮಾಡಬೇಕು. ಜಿಲ್ಲೆಯ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳು ನಷ್ಟವಾಗಿರುವ ತೋಟಗಳನ್ನು ಪರಿಶೀಲನೆ ನಡೆಸಬೇಕು ಎಂದು ಹೊದ್ದೂರಿನ ಬೆಳೆಗಾರ ಚೌರೀರ ರಮೇಶ್ ಮನವಿ ಮಾಡಿದ್ದಾರೆ.