ಮಡಿಕೇರಿ : ಜಿಲ್ಲಾಡಳಿತ ವತಿಯಿಂದ ಪದ್ಮಭೂಷಣ, ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ 118 ನೇ ಜನ್ಮ ದಿನಾಚರಣೆಯು ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನ(ಸನ್ನಿಸೈಡ್)ದಲ್ಲಿ ಭಾನುವಾರ ನಡೆಯಿತು.
ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಸುಬೇದಾರ್ ಗೌಡಂಡ ತಿಮ್ಮಯ್ಯ ಅವರು ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಿದರು.
ವಿದ್ಯಾರ್ಥಿನಿ ಶ್ರೀಷ ಮಾತನಾಡಿ ಭಾರತೀಯ ಸೇನಾ ಕ್ಷೇತ್ರಕ್ಕೆ ಜನರಲ್ ತಿಮ್ಮಯ್ಯ ಅವರ ಕೊಡುಗೆ ಅಪಾರ ಎಂದು ಹೇಳಿದರು. ರಾಷ್ಟ್ರದ ಮಹಾದಂಡ ನಾಯಕರಾಗಿ ಸೇನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು. ಜನರಲ್ ತಿಮ್ಮಯ್ಯ ಅವರು ರಾಷ್ಟ್ರಕಂಡ ಮಹಾನ್ ವೀರ ಸೇನಾನಿಯಾಗಿದ್ದು, ಜನರಲ್ ತಿಮ್ಮಯ್ಯ ಅವರ ಸೇನಾ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆ, ಛಲ, ಸಾಮರ್ಥ್ಯ ಮತ್ತು ಪ್ರಬುದ್ಧತೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ವಿವರಿಸಿದರು. ಜಿ.ಪಂ.ಸಿಇಒ ವರ್ಣಿತ್ ನೇಗಿ , ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿ ಬಳಗದ ಮುನೀರ್ ಮಾಚರ್ ಇತರರು ಇದ್ದರು.