ಮಡಿಕೇರಿ: ಪಠ್ಯ ಪುಸ್ತಕ ಪರಿಷ್ಕರಣೆ ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕು ಮತ್ತು ಶಿಕ್ಷಣ ಕ್ಷೇತ್ರದ ಅವ್ಯವಸ್ಥೆಯ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಆರ್.ಪಾಲಾಕ್ಷ ಅವರು, ಶಿಕ್ಷಣ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದರು.
ಪಠ್ಯ ಪುಸ್ತಕಗಳು ಬ್ರಾಹ್ಮಣ್ಯದಿಂದ ಕೂಡಿದೆ. ತಕ್ಷಣ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಿ, ಪರಿಷ್ಕೃತ ಪಠ್ಯವನ್ನು ಕೈಬಿಡಬೇಕು. ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಆರ್ಎಸ್ಎಸ್ ಕಾರ್ಯಕರ್ತನೇ ಹೊರತು ಶಿಕ್ಷಣ ತಜ್ಞನಲ್ಲ. ಆದರೂ ಪ್ರೊಫೆಸರ್ ಎಂದು ಸುಳ್ಳು ಹೇಳಿಕೆ ನೀಡಿ ತನ್ನೆಲ್ಲ ತಪ್ಪುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಅವಾಂತರ ನಡೆಯಲು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ ಕಾರಣ ಎಂದು ಆರೋಪಿಸಿದರು.
ನೂತನ ಪಠ್ಯ ಪುಸ್ತಕದಲ್ಲಿ ಮಾನವೀಯತೆ, ಶಾಂತಿ, ಪ್ರೀತಿ ಮತ್ತು ಮೈತ್ರಿ ಸಾರಿದ ಗೌರಮ್ಮ, ಬುದ್ಧ, ಪಿ.ಲಂಕೇಶ್, ಸಾರಾ ಅಬೂಬಕರ್, ಎಲ್.ಬಸವರಾಜು, ಕೆ.ನೀಲಾ, ಬಿ.ಟಿ.ಲಲಿತಾ ನಾಯಕ್ ಹಾಗೂ ಹೊಸ ಧರ್ಮಗಳ ಉದಯ ಪಠ್ಯವನ್ನು ಕೈಬಿಡಲಾಗಿದೆ. ಅಪ್ಪಟ ದೇಶ ಪ್ರೇಮಿ ಭಗತ್ ಸಿಂಗ್ ಅವರ ಪಠ್ಯವನ್ನು ಕೂಡ ಕೈಬಿಟ್ಟಿರುವುದು ಖಂಡನೀಯ ಎಂದರು.
ಒಕ್ಕೂಟದ ವಿರಾಜಪೇಟೆ ಉಪಾಧ್ಯಕ್ಷ ಹೆಚ್.ಆರ್.ಪರಶುರಾಮ್ ಮಾತನಾಡಿ, ಪಠ್ಯ ಪುಸ್ತಕ ಪರಿಸ್ಕರಣೆ ಸಮಿತಿಯಲ್ಲೂ ಬಿಜೆಪಿ, ಆರ್ಎಸ್ಎಸ್, ಬಜರಂಗದಳದವರನ್ನು ಸೇರಿಸಿಕೊಂಡು ದಮನಕಾರಿ ಧೋರಣೆ ಅನುಸರಿಸಲಾಗಿದೆ. ಚುನಾವಣೆ ಸಮೀಪಿಸುತ್ತಿರುವಂತೆಯೇ ಕೋಮು ಗಲಭೆ ಸೃಷ್ಟಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ವಿರೇಂದ್ರ ಪಾಟೀಲ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಜೆ.ಎಲ್.ಜನಾರ್ಧನ, ಜಿಲ್ಲಾ ಸಂಘಟನಾ ಸಂಚಾಲಕ ರಜನಿಕಾಂತ್, ಮಂಗಳೂರು ಜಿಲ್ಲಾ ಸಂಚಾಲಕ ಆನಂದ ಬೆಳ್ಳಾರೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.