News Karnataka Kannada
Friday, May 03 2024
ಮಡಿಕೇರಿ

ಪಂಪು ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ: ರೈತ ಸಂಘದಿಂದ ಪ್ರತಿಭಟನೆ

Kasargod school: Students protest after skipping meals
Photo Credit :

ಮಡಿಕೇರಿ: ವಿದ್ಯುತ್ ಬಿಲ್ ಪಾವತಿಸದ ಕೊಡಗು ಜಿಲ್ಲೆ ರೈತರು ಮತ್ತು ಬೆಳೆಗಾರರ ಪಂಪು ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಸೆಸ್ಕ್ ಏಕಾಏಕಿ ಕಡಿತಗೊಳಿಸುತ್ತಿರುವುದರ ವಿರುದ್ದ ರೈತ ಸಂಘ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮಾನವ ಸರಪಳಿ ರಚಿಸಿ ಸೆಸ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಮತ್ತು ಬೆಳೆಗಾರರು, ತಕ್ಷಣವೇ ವಿದ್ಯುತ್ ಮರು ಸಂಪರ್ಕ ನೀಡಬೇಕು ಎಂದು ಆಗ್ರಹಿಸಿದರು.

ಬೇರೆ ಜಿಲ್ಲೆಗಳಲ್ಲಿ 10 ಹೆಚ್.ಪಿ.ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಆದರೆ ಕೊಡಗಿನ ರೈತರು ಮತ್ತು ಬೆಳೆಗಾರರಿಗೆ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸೆಸ್ಕ್ ತನ್ನ ಧೋರಣೆಯನ್ನು ಕೈಬಿಡದಿದ್ದಲ್ಲಿ ಬೆಂಗಳೂರು ಚಲೋ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಪ್ರಾಕೃತಿಕ ವಿಕೋಪದಿಂದ ಕೊಡಗಿನ ರೈತರು ಮತ್ತು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರ್ಥಿಕ ಪರಿಸ್ಥಿತಿ ತೀರಾ ಕುಗ್ಗಿ ಹೋಗಿದ್ದು, ಈ ನಡುವೆಯೇ ಸೆಸ್ಕ್, ಪಂಪ್ ಸೆಟ್‌ಗಳ ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣದಿಂದ ವಿದ್ಯುತ್ ಸಂಪರ್ಕವನ್ನೇ ಕಡಿತ ಮಾಡುತ್ತಿದೆ. ಕುಡಿಯುವ ನೀರಿಗೆ ಅಳವಡಿಸಿದ್ದ ಪಂಪ್‌ಗಳ ಸಂಪರ್ಕವನ್ನು ಕೂಡ ಕಡಿತ ಮಾಡಿದ್ದು, ಮೂಲ ಸೌಲಭ್ಯಕ್ಕೂ ಕೊಳ್ಳಿ ಇಡಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕಾಫಿ ಮತ್ತು ಭತ್ತದ ಕೃಷಿ ಲಾಭದಾಯಕವಾಗಿಲ್ಲ. ಆದರೆ ಕೊಡಗು ಜಿಲ್ಲೆಯಲ್ಲಿ ಕಾಫಿ ಕೃಷಿ ನೆಪ ಹೇಳಿ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಪಾವತಿಗೆ ಒತ್ತಡ ಹೇರಲಾಗುತ್ತಿದೆ. ರಾಜ್ಯದ ಬೇರೆ ಜಿಲ್ಲೆಗಳಿಗೆ 10 ಹೆಚ್.ಪಿ ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ. ಇದೇ ನೀತಿ ಕೊಡಗು ಜಿಲ್ಲೆಯ ರೈತರು ಮತ್ತು ಬೆಳೆಗಾರರಿಗೆ ಏಕಿಲ್ಲ ಎಂದು ಮನು ಸೋಮಯ್ಯ ಪ್ರಶ್ನಿಸಿದರು.

ಮುಂದಿನ 6 ತಿಂಗಳ ಕಾಲ ಬಿಲ್ ಪಾವತಿಗೆ ಸಮಯಾವಕಾಶ ನೀಡಬೇಕು. ಈ ಅವಧಿಗೆ ಯಾವುದೇ ರೀತಿಯ ಬಡ್ಡಿ ಹಾಕಬಾರದು. ಕಂತುಗಳ ಮೂಲಕ ಬಿಲ್ ಪಾವತಿಗೂ ಅವಕಾಶ ಒದಗಿಸಬೇಕು. ವಿದ್ಯುತ್ ಗ್ರಿಡ್‌ಗಳ ಖಾಸಗೀಕರಣ ಮಾಡಬಾರದು ಎಂದು ಮನು ಸೋಮಯ್ಯ ಆಗ್ರಹಿಸಿದರು.

ಖಾಸಗಿ ಜಾಗದಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡು ಪ್ರಾಣಿಗಳು ಮೃತಪಟ್ಟರೆ ತೋಟದ ಮಾಲಕರನ್ನೇ ಹೊಣೆಗಾರರನ್ನಾಗಿ ಮಾಡಿ ಅರಣ್ಯ ಇಲಾಖೆ ಕೇಸ್ ದಾಖಲಿಸುತ್ತಿದೆ. ಕಾಡು ಪ್ರಾಣಿಗಳು ಕಾಡಿನಲ್ಲಿರಬೇಕು. ಅದು ಅರಣ್ಯ ಇಲಾಖೆ ಹೊಣೆಯಾಗಿದೆ. ತೋಟದ ಮಾಲಕರ ಮೇಲೆ ಅರಣ್ಯ ಇಲಾಖೆ ಹೂಡಿರುವ ಎಲ್ಲಾ ಕೇಸ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೊಡಗು ಜಿಲ್ಲೆಯ ರೈತರು ಮತ್ತು ಬೆಳೆಗಾರರ ಮನವಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಮತ್ತು ಸೆಸ್ಕ್ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತದೆ. ಮಾತ್ರವಲ್ಲದೆ, ಹೋರಾಟವನ್ನು ಬೆಂಗಳೂರು ಚಲೋ ಮೂಲಕ ರಾಜ್ಯವ್ಯಾಪಿ ವಿಸ್ತರಿಸಲಾಗುತ್ತದೆ ಎಂದು ಮನು ಸೋಮಯ್ಯ ಎಚ್ಚರಿಸಿದರು.

ಬಳಿಕ ಸೆಸ್ಕ್ ಮುಖ್ಯ ಕಚೇರಿಗೆ ಪಾದಯಾತ್ರೆ ತೆರಳಿದ ರೈತರು ಮತ್ತು ಬೆಳೆಗಾರರು ಕಚೇರಿ ಮುಂದೆ ಕೆಲಕಾಲ ಧರಣಿ ನಡೆಸಿದರು. ತದನಂತರ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಮುಖ್ಯ ಕಾರ್ಯಪಾಲಕ ಅಭಿಯಂತರರ ಮೂಲಕ ಸರಕಾರ ಹಾಗೂ ಸೆಸ್ಕ್ ಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಆಲೇಮಾಡ ಮಂಜುನಾಥ್, ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್, ಸವಿತಾ ಭೀಮಯ್ಯ,  ಮೇಚಂಡ ಕಿಶ, ಪುಚ್ಚಿಮಾಡ ರಾಯ್ ಮಾದಪ್ಪ, ಚಂಗುಲಂಡ ಸೂರಜ್, ಅಜ್ಜಮಾಡ ಚಂಗಪ್ಪ, ವಿಲ್ಸನ್, ಶಂಕರಪ್ಪ, ಜಯಶಂಕರ್, ಚಂದ್ರಶೇಖರ್, ಕೆ.ಬಿ ಸುಬ್ಬಯ್ಯ, ಹೂವಯ್ಯ, ಪ್ರಸಾದ್ ಮತ್ತಿತ್ತರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು