ಕೊಡಗು: ಅಸ್ಸಾಂನವರೆಂದು ಹೇಳಿಕೊಂಡಿರುವ ತೋಟ ಕಾರ್ಮಿಕರು, ತೋಟದ ಮಾಲಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಶನಿವಾರ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ನಡೆದಿದೆ. ಕಡಿಮೆ ವೇತನ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ತೋಟ ಮಾಲಕರ ಮೇಲೆ ಈ ಹಲ್ಲೆ ನಡೆದಿರುವುದಾಗಿ ಹೇಳಲಾಗಿದ್ದು, ಘಟನೆಯ ಬಳಿಕ ಹಲ್ಲೆಕೋರರು ನಾಪತ್ತೆಯಾಗಿದ್ದಾರೆನ್ನಲಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು, ಶೀಘ್ರವೇ ಗೃಹ ಸಚಿವರನ್ನು ಭೇಟಿಯಾಗಿ ವಲಸಿಗರ ಮೂಲದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ.
ಯಾವುದೇ ಸ್ಥಳೀಯ ಕಾರ್ಮಿಕರಿಂದ ಈವರೆಗೂ ಮಾಲಕರ, ಮಾಲಕರ ಮನೆಯ, ಮಾಲಕರ ಕುಟುಂಬಸ್ಥರ ಮೇಲಾಗಲೀ ದಾಳಿ ನಡೆದ ಉದಾಹರಣೆಗಳಿಲ್ಲ. ಆದರೆ ಟಿ.ಶೆಟ್ಟಿಗೇರಿಯಲ್ಲಿ ನಡೆದಿರುವ ಘಟನೆಯಿಂದ ಅಸ್ಸಾಮಿಗರ ಹೆಸರಿನಲ್ಲಿರುವ ವಲಸಿಗರಿಂದ ಮಾಲಕರು ಸೇರಿದಂತೆ ಕೊಡಗಿನವರಿಗೆ ಭದ್ರತೆಯ ವಿಷಯದಲ್ಲಿ ಭವಿಷ್ಯದಲ್ಲಿ ಅಪಾಯವಿರುವಂತೆ ಭಾಸವಾಗುತ್ತಿದೆ ಎಂದು ಬೋಪಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಕಡಿಮೆ ವೇತನ ನೀಡಲಾಗುತ್ತಿದೆ ಎಂಬ ನೆಪದಲ್ಲಿ ಮಾಲಕರ ಮನೆಯ ಮೇಲೆಯೇ ದಾಳಿ ನಡೆಸಿ ಎಲ್ಲಾ ವಲಸಿಗರು ನಾಪತ್ತೆಯಾಗಿದ್ದಾರೆ. ಕಡಿಮೆ ವೇತನದ ಕಾರಣಕ್ಕೆ ತೋಟದಲ್ಲಿ ವಲಸಿಗರನ್ನು ಸೇರಿಸಿಕೊಂಡಲ್ಲಿ ಇಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಕೊಡಗಿನ ನಿವಾಸಿಗಳಾದ ನಮಗೆ ಹಾಗೂ ಎಲ್ಲಾ ತೋಟದ ಮಾಲಕರಿಗೂ ಈ ಘಟನೆ ಒಂದು ಪಾಠವೂ ಹೌದು ಎಂದು ಅವರು ಹೇಳಿದ್ದಾರೆ.
ಆದ ಕಾರಣ ಸಂಬಂಧಪಟ್ಟ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಅವರು, ಹಾಗೆಯೇ ಓಲೈಕೆ ರಾಜಕಾರಣ ಮಾಡುವವರು ಮೂಲ ನಿವಾಸಿಗಳ, ಹಾಗೂ ದೇಶದ ಭದ್ರತೆಯ ಬಗ್ಗೆ ಗಮನವಹಿಸಿ ವಲಸಿಗರ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದೂ ಸಲಹೆ ಮಾಡಿದ್ದಾರೆ.