ಮಡಿಕೇರಿ : ಅರಣ್ಯ ಹಕ್ಕು ಕಾಯ್ದೆ 2006ರ ಜಾರಿಯ ಮೂಲಕ ಆದಿವಾಸಿಗಳಿಗೆ ಅವರ ಮೂಲಭೂತವಾದ ಹಕ್ಕುಗಳನ್ನು ಒದಗಿಸಲು ಸರ್ಕಾರಗಳು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಮೂಲ ಆದಿವಾಸಿ ವೇದಿಕೆಯ ಉಪಾಧ್ಯಕ್ಷರಾದ ಜೆ.ಕೆ.ತಿಮ್ಮ ಆಗ್ರಹಿಸಿದರು.
ವಿವಿಧ ಆದಿವಾಸಿ ಹಾಡಿಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ನಾಗರಹೊಳೆಯಲ್ಲಿ ಆಯೋಜಿತ 27ನೇ ವಿಶ್ವ ಆದಿವಾಸಿ ದಿನಾಚರಣೆಯಲ್ಲಿ, ಆದಿವಾಸಿಗಳ ಸಂಕೇತವಾಗಿರುವ ಬಿಲ್ಲು-ಉರುಣೆ, ಸೋರೆಬುರುಡೆಯನ್ನು ಪ್ರತಿಷ್ಟಾಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ತಿಮ್ಮ ಅವರು, ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಪ್ರದೇಶದ ಸಂಪೂರ್ಣ ಅಧಿಕಾರ ಮತ್ತು ನಿರ್ವಹಣೆಯ ಹಕ್ಕುಗಳನ್ನು ಆದಿವಾಸಿಗಳ ಅರಣ್ಯ ಹಕ್ಕುಗಳ ಗ್ರಾಮಸಭೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಬುಡಕಟ್ಟು ಕೃಷಿಕರ ಸಂಘದ ತಾಲ್ಲೂಕು ಸಂಚಾಲಕರಾದ ಜೆ.ಎಂ.ಸೋಮಯ್ಯ ಮಾತನಾಡಿ, ಬುಡಕಟ್ಟು ಪಂಚಾಯ್ತಿ ಕಾಯ್ದೆಯನ್ನು ಸಮರ್ಪಕವಾಗಿ ರಾಜ್ಯಾದ್ಯಂತ ಆದಿವಾಸಿಗಳು ವಾಸಿಸುತ್ತಿರುವ ಪ್ರದೇಶದಲ್ಲಿ ಅನುಷ್ಠಾನಗೊಳಿಸಿ, ಅನುಸೂಚಿತ ಬುಡಕಟ್ಟು ಪ್ರದೇಶ ಎಂದು ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಬೇಗೂರು ಪಾರೆ ನಾಣಚ್ಚಿ ಗದ್ದೆ ಹಾಡಿಯ ಅರಣ್ಯ ಹಕ್ಕು ಸಮಿತಿಯ ಕಾರ್ಯದರ್ಶಿ ಗಣೇಶ ಜೆ.ಎಲ್., ಬಾಳೆಕೋವು ಹಾಡಿಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಬಿ.ಸಿ.ಕಾಳ, ಕಾರ್ಯದರ್ಶಿ ಬಿ.ಕೆ.ಕಾಂತು, ಗೋಣಿಗದ್ದೆ ಹಾಡಿಯ ಮುಖಂಡ ಜೆ.ಎ.ಪುಟ್ಟಸ್ವಾಮಿ, ತುಂಡುಮುಂಡಗೆ ಕೊಲ್ಲಿ ಗದ್ದೆಹಾಡಿಯ ಯಜಮಾನ ಜೆ.ಕೆ.ಸಣ್ಣಪ್ಪ, ಕಾರ್ಯದರ್ಶಿ ವಿನೋದ್, ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಯ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು ಜೆ.ಎ.ಶಿವು, ಅಮ್ಮಾಳೆ ಅಮ್ಮಾ ಕಲಾ ತಂಡದ ಉದಯ, ಸುದೀಪ್, ಲೇಖ ಪಾಲ್ಗೊಂಡಿದ್ದರು.
ನಾಗರಹೊಳೆಯಲ್ಲಿ ವಿಶ್ವ ಆದಿವಾಸಿ ದಿನಾಚರಣೆ : ಆದಿವಾಸಿ ಹಕ್ಕಿಗಾಗಿ ಆಗ್ರಹ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.