ಇಂದು ತನ್ನ ನಿಸ್ವಾರ್ಥ ಸೇವೆಯಿಂದಾಗಿಯೇ ಜೇಸೀ ಸಂಸ್ಥೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ ಎಂದು ಕೊಡುಗೈ ದಾನಿ ಹರಪಳ್ಳಿ ರವೀಂದ್ರ ಅವರು ಹೇಳಿದರು. ಭಾನುವಾರ ಇಲ್ಲಿನ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಜೇಸೀ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಜೇಸಿ ಸದಸ್ಯರು 135 ದೇಶಗಳಲ್ಲಿ ಸೇವೆ ಸಲ್ಲಿಸುತಿದ್ದು ಇವರು ಯಾರಿಗೂ ವ್ಯವಹಾರಿಕ ಮನಸ್ಥಿತಿ ಇಲ್ಲ ಬದಲಿಗೆ ಪರಸೇವೆಯೇ ಪರಮೋಧರ್ಮ ಎಂದು ಭಾವಿಸಿದ್ದಾರೆ ಎಂದರು.
ಈ ಸಂಸ್ಥೆಯಲ್ಲಿ 18 ರಿಂದ 40 ರ ವಯೋಮಾನದ ಎಲ್ಲರೂ ಭಾಗಿಗಳಾಗಲು ಅವಕಾಶ ಇದ್ದು ದೇಶ ಸೇವೆ, ಸಮಾಜ ಸೇವೆ ಮಾಡುವ ಮುಕ್ತ ಅವಕಾಶದ ಜತೆಗೇ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಇದು ವೇದಿಕೆ ಆಗಿದೆ ಎಂದು ಅವರು ಹೇಳಿದರು. ಇಂದು ದೇಶ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರವನ್ನು ಯಾರೂ ಮರೆಯುವಂತಿಲ್ಲ , ಅದರಲ್ಲೂ ಇಡೀ ದೇಶವೇ ಕೊರೋನದಿಂದ ಕಂಗೆಟ್ಟಿದ್ದಾಗ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಅಪರಿಮಿತವಾದುದು ಎಂದು ಅವರು ಹೇಳಿದರು.
ನಾವು ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯವೇ ಅಲ್ಲ ಬದಲಿಗೆ ನಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಹೋದಾಗ ಮಾತ್ರ ಜೀವನದ ಸಾರ್ಥಕತೆ ಆಗುತ್ತದೆ ಎಂದು ಹೇಳಿದರು. ಜೇಸೀ ಮಾಜಿ ಅದ್ಯಕ್ಷೆ ಉಷಾರಾಣಿ ಅವರು ಮಾತನಾಡಿ ಜೇಸೀ ಸಂಸ್ಥೆಯ ಸದಸ್ಯರ ಸೇವೆಯನ್ನು ಶ್ಲಾಘಿಸಿದರು. ಜೇಸೀ ಅದ್ಯಕ್ಷಿಣಿ ಮಾಯಾ ಗಿರೀಶ ಅದ್ಯಕ್ಷತೆ ವಹಿಸಿದ್ದರು.