ಕೊಡಗು: ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು, ನಿಯಮಾನುಸಾರ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಸಮಿತಿ ನಗರದ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಸಿತು.
ಸಂಘದ ಜಿಲ್ಲಾಧ್ಯಕ್ಷೆ ಟಿ.ಬಿ.ಪೂರ್ಣಿಮಾ ಹಾಗೂ ಕಾರ್ಯದರ್ಶಿ ಸುಮನ್ ನೇತೃತ್ವದಲ್ಲಿ ಜಿಲ್ಲಾ ವ್ಯಾಪ್ತಿಯಿಂದ ಆಗಮಿಸಿದ್ದ ನೂರಾರು ಆಶಾ ಕಾರ್ಯಕರ್ತೆಯರು ಗಾಂಧಿ ಮಂಟಪದ ಬಳಿ ಸಮಾವೇಶಗೊಂಡು, ನಂತರ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿದರು.
ಸರ್ಕಾರದ ಇ-ಸಂಜೀವಿನಿ, ಎನ್ಸಿಡಿ ಸರ್ವೆ, ಕ್ವಾರಂಟೈನ್ ಆ್ಯಪ್ ಮೂಲಕ ಕೆಲಸ, ಇ-ಸಮೀಕ್ಷೆ ಕೆಲಸಗಳನ್ನು ಆಶಾ ಕಾರ್ಯಕರ್ತರಿಂದ ಒತ್ತಾಯ ಪೂರ್ವಕವಾಗಿ ಮಾಡಿಸಲಾಗುತ್ತಿದೆ. ಇದನ್ನು ಕೈಬಿಡಬೇಕು, ಕಫ ಪರೀಕ್ಷೆ ಸ್ಯಾಂಪಲ್ ತರಲು ಆಶಾ ಕಾರ್ಯಕರ್ತರನ್ನು ಒತ್ತಾಯಿಸಲಾಗುತ್ತಿದೆ. ಸುತ್ತೋಲೆಯಲ್ಲಿರುವಂತೆ ಆಶಾ ಕಾರ್ಯಕರ್ತರದ್ದಲ್ಲದ ಈ ಕೆಲಸವನ್ನು ಅವರಿಂದ ಮಾಡಿಸಲಾಗುತ್ತಿದ್ದು, ತಕ್ಷಣ ಹೊರೆಯನ್ನು ತಗ್ಗಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತರು ಅವರಿಗೆ ನಿಗದಿಪಡಿಸಿದ ಕ್ಷೇತ್ರದಲ್ಲಿ ಮಾತ್ರ ಕಾರ್ಯನಿರ್ವಹಿಸುವಂತಾಗಬೇಕು. ಅವರನ್ನು ಬೇರೆ ಪ್ರದೇಶಗಳಿಗೆ ನಿಯೋಜಿಸಬಾರದು ಎನ್ನುವ ಆದೇಶ ಪಾಲನೆ ಮಾಡುವ ಮೂಲಕ, ಆಶಾ ಕಾರ್ಯಕರ್ತರನ್ನು ಚೆಕ್ಪೋಸ್ಟ್ ಕರ್ತವ್ಯಕ್ಕೆ ನಿಯೋಜಿಸುವುದನ್ನು ನಿಲ್ಲಿಸಬೇಕು. ಕೋವಿಡ್ ನಿಯಂತ್ರಣ ಚಟುವಟಿಕೆಗಳಲ್ಲಿ ಡಾಟಾ ತುಂಬಿಸುವುದು, ಲಸಿಕೆ ಸಾಗಿಸುವುದು, ಲಸಿಕಾ ಕೇಂದ್ರದಲ್ಲಿ ವಿವಿಧ ಕೆಲಸಗಳನ್ನು ಮಾಡಿಸುವುದು, ಸ್ವಾಬ್ ತೆಗೆಯುವ ಕೇಂದ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಆಶಾ ಕಾರ್ಯಕರ್ತರನ್ನು ಭಾಗಿಗಳನ್ನಾಗಿ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸುವ ಬೇಡಿಕೆಯನ್ನು ಪ್ರತಿಭಟನಾಕಾರರು ಮುಂದಿಟ್ಟರು.
ಪ್ರತಿಭಟನಾಕಾರರ ಪರವಾಗಿ ಸಂಘದ ಪದಾಧಿಕಾರಿಗಳು ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಸಂಘದ ಮಡಿಕೇರಿ ತಾಲೂಕು ಅಧ್ಯಕ್ಷೆ ಗೀತಾ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಶಾಂತಿ, ಸಂಘದ ರಾಜ್ಯ ಕಾರ್ಯದರ್ಶಿ ನಾಗಲಕ್ಷ್ಮಿ ಡಿ, ಸಲಹೆಗಾರ ರವಿ ಸೇರಿದಂತೆ ಆಶಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.