ಕೊಡಗು: ಕೊಡಗಿನ ಶ್ರೀಮಂತ ಸಂಸ್ಕೃತಿ, ಆಚಾರ, ವಿಚಾರ ಪರಂಪರೆಗಳಿಗೆ ಮೋಜು ಮಸ್ತಿಯ ಹೆಸರಿನಲ್ಲಿ ಅಪಚಾರವೆಸಗದ ಮತ್ತು ಈ ನೆಲದ ಧಾರ್ಮಿಕ ಮೂಲ ನೆಲೆಗಟ್ಟಿಗೆ ಹಾನಿಯನ್ನುಂಟುಮಾಡದ ಪ್ರವಾಸೋದ್ಯಮವಷ್ಟೇ ನಡೆಯಲಿ ಎಂದು ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಲವರು ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ನಡೆದ ‘ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಸಾಧಕ-ಬಾಧಕ’ ಕುರಿತ ಸಂವಾದದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಪ್ರವಾಸೋದ್ಯಮದ ಅನಿವಾರ್ಯತೆ ಮತ್ತು ಅನಾನುಕೂಲತೆಗಳ ಬಗ್ಗೆ ಮಾತನಾಡಿದರು.
ಅತ್ಯಂತ ವಿಶಿಷ್ಟವಾದ ಭೌಗೋಳಿಕ ಪರಿಸರವನ್ನು ಹೊಂದಿರುವ ಕೊಡಗು ಜಿಲ್ಲೆ, ಸುಂದರ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಇಂತಹ ಸಂಸ್ಕೃತಿ ಪರಂಪರೆಗಳಿಗೆ ತೊಡಕನ್ನು ಉಂಟು ಮಾಡದ ರೀತಿಯ ಪ್ರವಾಸೋದ್ಯಮ ನಡೆಸಲು ಯಾವುದೇ ತೊಡಕಿಲ್ಲವೆನ್ನುವ ಅಭಿಪ್ರಾಯ ವ್ಯಕ್ತವಾಯಿತು.
ಅನೈತಿಕ ಚಟುವಟಿಕೆ ಮತ್ತು ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿ ನಡೆಯುವ ಪ್ರವಾಸೋದ್ಯಮವನ್ನು ಪ್ರತಿಯೊಬ್ಬರೂ ವಿರೋಧಿಸಬೇಕಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟರು.
ಪ್ರವಾಸಿ ತಾಣಗಳ ಪಟ್ಟಿಯಿಂದ ದೇವಾಲಯಗಳನ್ನು ತೆಗೆದು ಧಾರ್ಮಿಕ ಕೇಂದ್ರಗಳೆಂದು ಗುರುತಿಸಬೇಕು, ಅನಧಿಕೃತ ಹೋಂಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಪ್ರವಾಸೋದ್ಯಮದ ನಿಯಮ ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎನ್ನುವ ಒಟ್ಟಾಭಿಪ್ರಾಯ ಸಭೆಯಿಂದ ಮೂಡಿ ಬಂತು. ಪ್ರವಾಸೋದ್ಯಮದ ಅತಿರೇಕಗಳಿಂದ ಕೊಡಗಿನ ಸಂಸ್ಕೃತಿಯ ಮೇಲಾಗುವ ಹಾನಿ ಮತ್ತು ಪ್ರವಾಸೋದ್ಯಮವನ್ನು ಕೈಬಿಟ್ಟರೆ ಇದನ್ನೇ ನಂಬಿರುವ ಶ್ರಮಿಕ ವರ್ಗಕ್ಕಾಗುವ ಕಷ್ಟ, ನಷ್ಟದ ಬಗ್ಗೆಯೂ ಚರ್ಚಿಸಲಾಯಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ, ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಎಂ.ಬಿ.ದೇವಯ್ಯ, ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ಕುಶಾಲಪ್ಪ, ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್, ಮೊಂತಿ ಗಣೇಶ್, ಪ್ರವಾಸೋದ್ಯಮ ಅವಲಂಬಿತರ ಒಕ್ಕೂಟದ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಪ್ರಮುಖರಾದ ರಾಜೀವ್ ಬೋಪಯ್ಯ, ಚೆಯ್ಯಂಡ ಸತ್ಯ, ಚಮ್ಮಟ್ಟಿರ ಪ್ರವೀಣ್, ನಾಗೇಂದ್ರ ಪ್ರಸಾದ್, ಮಾದೇಟಿರ ತಿಮ್ಮಯ್ಯ ಮೊದಲಾದವರು ಪಾಲ್ಗೊಂಡಿದ್ದರು.