ಮಡಿಕೇರಿ: ಕಾವೇರಿ ತೀರ್ಥೋಧ್ಭವದ ವಿಚಾರದಲ್ಲಿ ಕಾಂಗ್ರಸ್ಸಿಗರು ವಿನಾ ಕಾರಣ ರಾಜಕೀಯ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಆರೋಪಿಸಿದರು.
ಗೋಣಿಕೊಪ್ಪಲಿನ ಆರ್ ಎಂ ಸಿಯಲ್ಲಿ ನಡೆದ ಸೇವಾ ಸಮರ್ಪಣಾವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅ.2ರಂದು ನಡೆದ ಸಭೆಯಲ್ಲಿ ಭಕ್ತರಿಗೆ ನಿರ್ಬಂಧ ಹೇರುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೂ ಕಾಂಗ್ರಸ್ಸಿಗರು ಪತ್ರಿಕಾಗೋಷ್ಠಿ ನಡೆಸಿ ಭಕ್ತರಿಗೆ ನಿರ್ಬಂಧ ಹೇರಲಾಗುತ್ತಿದೆ ಎಂದು ಹುಯಿಲೆಬ್ಬಿಸಿದ್ದಾರೆ ಎಂದು ಆರೋಪಿಸಿದರು.
ತುಲಾ ಸಂಕ್ರಮಣದ ತೀರ್ಥೋದ್ಭವದ ಸಂದರ್ಭ ಭಾಗವಹಿಸಲು ಮುಕ್ತ ಅವಕಾಶ ಮಾಡಿಕೊಡುವುದಾಗಿ ಈ ಸಂದರ್ಭ ಹೇಳಿದ ಬೋಪಯ್ಯ, ಗುರುವಾರ ನಡೆಯುವ ಸಭೆಯಲ್ಲಿ ಭಕ್ತರ ಪರವಾಗಿ ತೀರ್ಮಾನ ಕೈಗೊಳ್ಳಲಾಗುತ್ತದೆ, ಕೋವಿಡ್ ನಿಯಮಾವಳಿಗಳನ್ನು ಭಕ್ತಾದಿಗಳು ಕಡ್ಡಾಯವಾಗಿ ಪಾಲಿಸಿ, ಭಾಗವಹಿಸಬಹುದು. ಭಕ್ತಾದಿಗಳು ಯಾವುದೇ ಊಹಾಪೋಹಗಳಿಗೆ ಕಿವಿಕೊಡಬಾರದು ಎಂದು ಬೋಪಯ್ಯ ಇದೇ ಸಂದರ್ಭ ಮನವಿ ಮಾಡಿಕೊಂಡರು.
ಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭ ಕೊಡಗಿನ ಭಕ್ತರು ಪಾಲ್ಗೊಳ್ಳಲು ಮುಕ್ತ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ ಅವರು, ವಾಹನ ಸಂಚಾರ ಕುರಿತು ಗುರುವಾರದ ಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನಿಸಲಾಗುವುದು ಎಂದರು.
ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಯಾಗಿದ್ದ ರಾಜ್ಯ ಬಿಜೆಪಿ ಮುಖಂಡ ಮೋಣಪ್ಪ ಭಂಡಾರಿ ಅವರು, ಜಿಲ್ಲೆಯ ಅಭಿವೃದ್ಧಿ, ದೇಶದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯವೈಖರಿ, ಪಕ್ಷ ಸಂಘಟನೆ, ಮುಂಬರುವ ಚುನಾವಣೆಗಳ ಸಿದ್ಧತೆ ಮತ್ತಿತರ ಹಲವು ವಿಚಾರಗಳ ಬಗ್ಗೆ ವಿವರಿಸಿದರು.
ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ರಾಬಿನ್ ದೇವಯ್ಯ, ರಾಜ್ಯ ಘಟಕದ ಮನು ಮುತ್ತಪ್ಪ, ಮಹಿಳಾ ಮೋರ್ಚಾದ ಮಾಜಿ ಅಧ್ಯಕ್ಷೆ ರೀನಾ ಪ್ರಕಾಶ್, ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ ಮತ್ತಿತರರು ಉಪಸ್ಥಿತರಿದ್ದರು.