ಮಡಿಕೇರಿ : ಸಮೀಪದ ಕಗ್ಗೋಡ್ಲುವಿನ ಆನೆಕೊಲ್ಲಿಯ ದೇವರ ಕಾಡಿನಲ್ಲಿ ಬೇಟೆ ಅಯ್ಯಪ್ಪ ಸ್ವಾಮಿಯ ಕಲ್ಲಾಡ್ಚ ಹಬ್ಬವು ಶ್ರದ್ಧಾಭಕ್ತಿಯೊಂದಿಗೆ ಊರವರ ಸಮ್ಮುಖದಲ್ಲಿ ನಡೆಯಿತು.
ಕೊಡಗಿನಲ್ಲಿ ಸಾಮಾನ್ಯವಾಗಿ ಪ್ರತಿ ಗ್ರಾಮಗಳಲ್ಲೂ ದೇವರ ಕಾಡುಗಳಿದ್ದು, ಈ ದೇವರ ಕಾಡುಗಳ ಅಧಿದೇವತೆಯಾಗಿ ಭದ್ರಕಾಳಿ, ವನಭದ್ರಕಾಳಿ, ಬೇಟೆ ಅಯ್ಯಪ್ಪ ಹೀಗೆ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ.
ಪ್ರತಿ ವರ್ಷವೂ ಈ ದೇವರಿಗೆ ದೇವರ ಕಾಡಿನಲ್ಲಿ ಪೂಜೆ ಸಲ್ಲಿಸಿ ಸುತ್ತಮುತ್ತಲ ರೈತರು ಮತ್ತು ಜನಜಾನುವಾರುಗಳನ್ನು ಕಾಪಾಡುವಂತೆ ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದು ಬಂದಿದೆ.
ವನದೇವರಾಗಿರುವ ಈ ದೇವತೆಗಳು ಗ್ರಾಮಗಳ ಜನರನ್ನು ಕಾಪಾಡಿಕೊಂಡು ಬರುತ್ತಿವೆ ಎಂಬ ನಂಬಿಕೆ ಪ್ರತಿ ಗ್ರಾಮಸ್ಥರದ್ದಾಗಿದೆ. ಹೀಗಾಗಿ ತಮ್ಮ ಸಾಕು ಪ್ರಾಣಿಗಳು ವೃದ್ಧಿಗೆ ಹರಕೆ ಸಲ್ಲಿಸುವ ಸಂಪ್ರದಾಯವೂ ಇದೆ.
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿರುವಂತೆ ಮಡಿಕೇರಿ ಸಮೀಪದ ಕಗ್ಗೋಡ್ಲುವಿನ ಆನೆಕೊಲ್ಲಿಯಲ್ಲಿ ಬೇಟೆ ಅಯ್ಯಪ್ಪ ದೇವರ ಕಾಡಿನಲ್ಲಿ ವೃಶ್ಚಿಕ ಮಾಸದಲ್ಲಿ ಒಂದು ತಿಂಗಳಕಾಲ ವನಶಾಸ್ತಾವು ಪೂಜೆ ನಡೆಸಿ ಕೊನೆಯ ದಿನ ಕಲ್ಲಾಡ್ಚ ಹಬ್ಬವನ್ನು ನಡೆಸಲಾಯಿತು.
ಈ ದಿನ ಸುತ್ತಮುತ್ತಲ ಜನ ಸೇರಿ ದೇವರಕಾಡಿನಲ್ಲಿಯೇ ನೈವೇದ್ಯ ತಯಾರಿಸಿ ಅಯ್ಯಪ್ಪನಿಗೆ ಸಮರ್ಪಣೆ ಮಾಡುವುದರೊಂದಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲದ ಬೆಳೆ, ಜನಜಾನುವಾರುಗಳನ್ನು ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮಹಾಪೂಜೆಯ ನಂತರ ನೆರೆದವರೆಲ್ಲರೂ ಒಟ್ಟಾಗಿ ಕುಳಿತು ಕಾಡಿನಲ್ಲಿಯೇ ಬೋಜನ ಸ್ವೀಕರಿಸುವುದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ. ಈ ಬಾರಿಯೂ ಪೂಜೆಯನ್ನು ಅತ್ಯಂತ ಶ್ರದ್ಧಾಭಕ್ತಿಯೊಂದಿಗೆ ಸಂಪ್ರದಾಯದಂತೆ ನಡೆಸಲಾಯಿತು. ಈ ವೇಳೆ ದೇವರಕಾಡಿನ ಸುತ್ತಮುತ್ತಲ ನಿವಾಸಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.