ಮಡಿಕೇರಿ ; ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯು ಮುಂದಿನ ಡಿಸೆಂಬರ್ 12 ರಂದು ನಡೆಯಲಿದ್ದು ಕೊಡಗು ಜಿಲ್ಲೆಯ ಒಂದು ನಡೆಯುತ್ತಿದೆ. ಕೊಡಗು ಜಿಲ್ಲೆಯ ನಿರ್ದೆಶಕರ ಸ್ಥಾನಕ್ಕೆ ಈ ಹಿಂದೆ ಹೊರ ಜಿಲ್ಲೆಯವರು ಆಯ್ಕೆಯಾಗುತಿದ್ದರು.
ಆದರೆ ಬದಲಾದ ಸನ್ನಿವೇಶದಲ್ಲಿ ಈ ಬಾರಿ ಸ್ಥಳೀಯರೇ ಚುನಾವಣೆಗೆ ಸ್ಪರ್ದಿಸಿದ್ದು ಹೊರಜಿಲ್ಲೆಯವರು ಯಾರೂ ನಾಮಪತ್ರವನ್ನೂ ಸಲ್ಲಿಸಲಿಲ್ಲ. ಈಗ ನಡೆಯುತ್ತಿರುವುದು ರಾಜ್ಯದ ಪ್ರಬಲ ಒಕ್ಕಲಿಗ ಜನಾಂಗಕ್ಕೆ ಮಾತ್ರ ಸೀಮಿತವಾದ ಚುನಾವಣೆ ಆಗಿದ್ದರೂ ಈಗ ಇರುವ ಪೈಪೋಟಿ ಮತ್ತು ಪ್ರಚಾರ ಯಾವುದೇ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಯನ್ನು ಜ್ಞಾಪಿಸುವಂತೆ ಮಾಡುತ್ತಿದೆ.
ಕೊಡಗಿನ ಸೋಮವಾರಪೇಟೆ ತಾಲೂಕಿನಲ್ಲಿ 14,527 ಮತದಾರರೂ, ವೀರಾಜಪೇಟೆ ತಾಲೂಕಿನಲ್ಲಿ 305 ಮತ್ತು ಮಡಿಕೇರಿ ತಾಲೂಕಿನಲ್ಲಿ 678 ಮತದಾರರೂ ಸೇರಿ ಒಟ್ಟು 15,510 ಮತದಾರರಿದ್ದಾರೆ. ಈಗ ಚುನಾವಣೆಗೆ ಒಟ್ಟು ನಾಲ್ವರು ಸ್ಪರ್ದಿಸಿದ್ದು ನಾಲ್ವರೂ ಅವಿಭಜಿತ ಸೋಮವಾರಪೇಟೆ ತಾಲೂಕಿನವರೇ ಆಗಿದ್ದಾರೆ.
ಮತದಾರರು ಹೆಚ್ಚಿರುವ ಸೋಮವಾರಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಇಬ್ಬರು ಅಭ್ಯರ್ಥಿಗಳ ಪೈಪೋಟಿ ಭರ್ಜರಿಯಾಗಿಯೇ ನಡೆದಿದೆ. ಹಿಂದೆಂದೂ ಕಂಡು ಕಾಣದಂತಹ ಪ್ರಚಾರ ಮತ್ತು ಆಮಿಷ ಕಂಡು ಬರುತ್ತಿದೆ. ಇಬ್ಬರು ಅಭ್ಯರ್ಥಿಗಳ ಮನೆಯಲ್ಲೂ ನಿತ್ಯ ರಾತ್ರಿ ಬಾಡೂಟ , ಪಾನ ಗೋಷ್ಟಿ ನಡೆಯುತ್ತಿದೆ. ಇದಲ್ಲದೆ ನಿತ್ಯ ಗ್ರಾಮಗಳಲ್ಲಿ 200-300
ಮತದಾರರನ್ನು ಸೇರಿಸಿಕೊಂಡು ಗುಂಡು ತುಂಡಿನ ವಿತರಣೆ ನಡೆಸಿ ಮತದಾರರ ಮನವೊಲಿಸುವ ಕೆಲಸಕ್ಕೆ ಅಭ್ಯರ್ಥಿಗಳು ಮುಂದಾಗಿದ್ದಾರೆ. ಶನಿವಾರ ತಾಕೇರಿ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ಏರ್ಪಡಿಸಿದ್ದ ಔತಣ ಕೂಟಕ್ಕೆ 500ಕ್ಕೂ ಹೆಚ್ಚು ಮತದಾರರು ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
ತೋಳೂರು ಶೆಟ್ಟಳ್ಳಿ, ಕೂತಿ, ಹೆಬ್ಬಾಲೆ, ಗೌಡಳ್ಳಿ ಇನ್ನೂ ಅನೇಕ ಕಡೆಗಳಲ್ಲಿ ಔತಣಕೂಟ ನಡೆಸಿ ಮತಗಳಿಕೆ ಯತ್ನ ನಡೆದಿದೆ. ಒಮಿಕ್ರಾನ್ ವೈರಸ್ ನ ಭೀತಿಯ ನಡುವೆಯೂ ಈ ಕೂಟಗಳಲ್ಲಿ ಕನಿಷ್ಟ ಪಕ್ಷ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಕೂಡ ಧರಿಸುತ್ತಿಲ್ಲ. ಚುನಾವಣಾ ಅಧಿಕಾರಿಯೊಬ್ಬರು ಕೊಡಗಿಗೆ ನೇಮಿಸಲಾಗಿದ್ದರೂ ಮುಕ್ತ ಮತ್ತು ನ್ಯಾಯ ಸಮ್ಮತ
ಚುನಾವಣೆಗೆ ತದ್ವಿರುದ್ದವಾಗಿ ರಾಜಾರೋಷವಾಗಿಯೇ ಔತಣ ಕೂಟಗಳನ್ನು ಏರ್ಪಾಡು ಮಾಡಲಾಗುತ್ತಿದೆ.
ಈ ಕುರಿತು ಕಾನೂನು ಜಾರಿ ಅಧಿಕಾರಿಗಳದ್ದು ದಿವ್ಯ ನಿರ್ಲಕ್ಷ್ ಈಗಾಗಲೇ ಅಭ್ಯರ್ಥಿಗಳ ಬೆಂಬಲಿಗರು ಹಣ ಹಂಚಿಕೆಗೆ
ಮತದಾರರ ಪಟ್ಟಿ ಸಿದ್ದಪಡಿಸುತಿದ್ದು ಬುಧವಾರದ ನಂತರ ಮತದಾರರಿಗೆ ಹಣ ಹಂಚುವಿಕೆ ಆರಂಬಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಪ್ರತಿಯೊಬ್ಬ ಮತದಾರರಿಗೂ ಕನಿಷ್ಟ ಎರಡು ಸಾವಿರ ರೂಪಾಯಿಗಳಿಂದ ನಾಲ್ಕು ಸಾವಿರ ರೂಪಾಯಿಗಳ ವರೆಗೂ ಹಣದ ಹಂಚಿಕೆ ನಡೆಯಲಿದೆ ಎಂದು ವದಂತಿಗಳು ಹರಿದಾಡುತ್ತಿವೆ. ಈ ರೀತಿಯಾಗಿ ಮತದಾರರಿಗೆ ಆಮಿಷವೊಡ್ಡುತಿದ್ದರೂ ಸಂಬಂಧಪಟ್ಟವರು ಮಾತ್ರ ತುಟಿ ಪಿಟಕ್ ಎನ್ನದಿರುವುದು ನಮ್ಮ ವ್ಯವಸ್ಥೆಯ ದುರಂತವಾಗಿದೆ. ಜಿಲ್ಲೆಯಲ್ಲಿ ಒಟ್ಟು 31 ಮತಗಟ್ಟೆಗಳನ್ನು ಸ್ಥಾಪಿಸಿದ್ದು ಡಿಸೆಂಬರ್ 15 ರಂದು ಮತಗಳ ಎಣಿಕೆ ನಡೆಯಲಿದೆ.