ಬೇಲೂರು: ವಿಶ್ವ ಪ್ರಸಿದ್ದ ಪ್ರವಾಸಿ ತಾಣ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ಮುಂಭಾಗ ತಿಂಡಿ- ತಿನಸುಗಳ ಮಾರಾಟಕ್ಕೆ ಅವಕಾಶ ನೀಡಿದ್ದು, ನಾಯಿ ಕೊಡೆಯಂತೆ ತಲೆ ಎತ್ತಿರುವ ತಿಂಡಿಗಾಡಿಗಳಿಂದ ಪ್ರದೇಶ ಅಸ್ವಸ್ಥತೆ ತಾಣವಾಗುತ್ತಿದೆ. ಈ ಬ ಬಗ್ಗೆ ಪ್ರವಾಸಿಗರು ಕೂಡ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ದೇಗುಲದಿಂದ ದೂರದಲ್ಲಿ ತಿಂಡಿ ತಿನಿಸುಗಳ ಮಾರಾಟಕ್ಕೆ ದೇಗುಲದ ಆಡಳಿತ ಮುಂದಾಗಬೇಕಿದೆ ಎಂದು ಸ್ಥಳೀಯ ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಲೂರು ಚನ್ನಕೇಶವಸ್ವಾಮಿ ದೇಗುಲದಲ್ಲಿನ ಶಿಲ್ಪಕಲಾ ವೈಭವದ ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ದೇಶ- ವಿದೇಶದಿಂದ ಬರುವ ವಾಡಿಕೆ ಇದೆ. ಆದರೆ ದೇವಳ ಪರಿಸರ ತಿಂಡಿಗಾಡಿಗಳಿಂದ ಆವೃತವಾಗಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ದೇಗುಲ ಅವರಣ ಮತ್ತು ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆಗೆ ಒತ್ತು ನೀಡಬೇಕಿದೆ.
ಆದರೆ ದೇಗುಲ ಬಳಿಯೇ ಸೌತೆಕಾಯಿ, ಕಲ್ಲಂಗಡಿ, ಮಾವಿನಕಾಯಿ, ಎಳೆನೀರು, ಪಾನಿಪುರಿ ಸೇರಿದಂತೆ ನಾನಾ ತಿಂಡಿ ತಿನಿಸುಗಳು ಮಾರಾಟ ಹೆಚ್ಚಿದ್ದು, ಸ್ವಚ್ಛತೆ ಕಾಪಾಡುವುದು ಸವಾಲಾಗಿದೆ. ಈ ಬಗ್ಗೆ ದೇಗುಲದ ಆಡಳಿತ ಮತ್ತು ಪುರಾತತ್ತ್ವ ಇಲಾಖೆ ಗಮನ ನೀಡಬೇಕು ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೆ ಪಾರ್ಕಿಂಗ್ ಕೂಡ ಅವ್ಯವಸ್ಥೆದಿಂದ ಕೂಡಿದೆ. ಬೇಕಾಬಿಟ್ಟಿ ತಮ್ಮ ವಾಹನಗಳನ್ನು ನಿಲುಗಡೆ ಮಾಡುವ ಮೂಲಕ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಇದರಿಂದ ಸ್ಥಳೀಯರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಶೀಘ್ರವೇ ದೇಗುಲದ ಹಿಂಭಾಗ ಪಾರ್ಕಿಂಗ್ ಸ್ಥಳ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲಿನ ತಿಂಡಿ ತಿನಿಸುಗಳ ಗಾಡಿ ಅಂಗಡಿಗಳು ಗುಣಮಟ್ಟದ ಆಹಾರ ಒದಗಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.