ಕೊಣನೂರು: ಅಂತರಿಕ ಸ್ವಚ್ಛತೆ ಎಷ್ಟು ಮುಖ್ಯವೋ, ಬಾಹ್ಯ ಸ್ವಚ್ಛತೆಯು ಅಷ್ಟೆ ಮುಖ್ಯ. ಇದಕ್ಕೆ ಆದ್ಯತೆ ನೀಡಿದರೆ ಬಹುಪಾಲು ರೋಗಗಳಿಂದ ಮುಕ್ತವಾಗಬಹುದು ಎಂದು ವೈದ್ಯಾಧಿಕಾರಿ ಡಾ. ಸುನಿಲ್ ತಿಳಿಸಿದರು.
ಇಲ್ಲಿನ ಬಸ್ನಿಲ್ದಾಣದಲ್ಲಿ ಎಸ್.ಕೆ. ಶಿವಮ್ಮ ಮತ್ತು ಜಾನಪದ ಕಲಾ ತಂಡದವರಿಂದ ಬೀದಿ ನಾಟಕ ಹಾಗೂ ಜಾನಪದ ಗೀತೆಗಳನ್ನು ಹಾಡುವುದರ ಮೂಲಕ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛಭಾರತ ಅಭಿಯಾನಕ್ಕೆ ಕೈಜೋಡಿಸುವ ಮೂಲಕ ನಮ್ಮ ಪರಿಸರದ ಸ್ವಚ್ಛತ ಕಾಪಾಡಿಕೊಳ್ಳಬೇಕು. ಈ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಬೇಕಿದೆ ಎಂದರು.
ಆರೋಗ್ಯ ನಿರೀಕ್ಷಕ ಎಂ.ಆರ್. ಆನಂದಗೌಡ ಮಾತನಾಡಿ ಆರೋಗ್ಯ, ವಾತಾವರಣ, ಸಮಾಜದ ನಿರ್ಮಾಣದ ದಿಶೆಯಲ್ಲಿ ಸ್ವಚ್ಛತೆ ಬಹುಮುಖ್ಯವಾಗಿದ್ದು, ಪ್ರಕೃತಿಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದಾಗ, ಅದು ಮನುಷ್ಯನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಹಾಗಾಗಿ ಪರಿಸರವನ್ನು ಹಾಳುಗೆಡವದೆ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದರು.
ಗ್ರಾ.ಪಂ ಅಧ್ಯಕ್ಷೆ ಮಿಜ್ಬಾ ರಿಜ್ವಾನ್ ಮಾತನಾಡಿ ಜನಸಾಮಾನ್ಯರಲ್ಲಿ ಆರೋಗ್ಯ, ಶೌಚಾಲಯ ಸ್ವಚ್ಛತೆ ಮುಂತಾದವುಗಳ ಬಗ್ಗೆ ಅರಿವು ಮೂಡಿಸಿ ಜನರನ್ನು ಎಚ್ಚರಗೊಳಿಸುವುದೇ ಬೀದಿ ನಾಟಕಗಳ ಮುಖ್ಯ ಉದ್ದೇಶ. ಬೀದಿನಾಟಕಗಳನ್ನು ವೀಕ್ಷಿಸುವ ಮೂಲಕ ಸಾರ್ವಜನಿಕರು ಜಾಗೃತರಾಗಬೇಕು ಎಂದರು.
ಈ ಸಂದರ್ಭದಲ್ಲಿ ಉಪತಹಶೀಲ್ದಾರ್ ಬಿ.ಆರ್. ಕುಮಾರ್, ಗ್ರಾ.ಪಂ ಕಾರ್ಯದರ್ಶಿ ಮಂಜುನಾಥ್, ಆಸ್ಪತ್ರೆಯ ಪ್ರದಸ ಆನಂದ್, ದ್ವಿದಸ ಕೃಷ್ಣೇಗೌಡ, ಶುಶ್ರೂಶಕಿ ದಿವ್ಯ, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಜಾನಪದ ಕಲಾತಂಡದವರು ಮುಂತಾದವರು ಉಪಸ್ಥಿತರಿದ್ದರು.