ಚಿಕ್ಕಮಗಳೂರು: ಈಗಾಗಲೇ ಬಿಜೆಪಿ ಪಕ್ಷದಿಂದ ಹೊರ ಬಂದಿರುವ ತಾವು ಅಪಾರ ಬೆಂಬಲಿಗರೊಂದಿಗೆ ಇದೇ ಫೆ.19 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದಾಗಿ ಹೆಚ್.ಡಿ. ತಮ್ಮಯ್ಯ ಘೋಷಿಸಿದ್ದಾರೆ.
ಬಿಜೆಪಿಯಿಂದ ಹೊರಬಂದ ಮೇಲೂ ಜನರ ಅಭೂತಪೂರ್ವ ಬೆಂಬಲ ದೊರಕಿರುವುದು ಸಂತಸ ತಂದಿದೆ. ಫೆ ೧೯ ರಂದು ಭಾನುವಾರ ಬೆಂಗಳೂರಿನಲ್ಲಿ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದಾಗಿ ಹೆಚ್.ಡಿ. ತಮ್ಮಯ್ಯ ಪ್ರಕಟಿಸಿದರು.
ಅವರು ಶನಿವಾರ ನಗರದಲ್ಲಿ ಹೆಚ್.ಡಿ. ತಮ್ಮಯ್ಯ ಅವರ ಅಭಿಮಾನಿ ಬಳಗ ಏರ್ಪಡಿಸಿದ್ದ ಬದಲಾವಣೆ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅಪಾರವಾದ ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ಹಾಗೂ ಸ್ನೇಹಿತರನ್ನುದ್ದೇಶಿಸಿ ಮಾತನಾಡಿದರು.
ಬಿಜೆಪಿಯಲ್ಲಿ ಕಳೆದ 20 ವರ್ಷಗಳಿಂದ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದು ಇಬ್ಬರು ನನಗೆ ತುಂಬಾ ನೋವನ್ನುಂಟು ಮಾಡಿದ್ದರಿಂದ ಮನನೊಂದು ಅನಿವಾರ್ಯವಾಗಿ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದೇನೆ, ನನ್ನ ಮುಂದಿನ ರಾಜಕೀಯ ಬೆಳವಣಿಗೆಗೆ ಕಾಂಗ್ರೇಸ್ ಪಕ್ಷ ಸೇರುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಕಟ್ಟುವಲ್ಲಿ ಪ್ರಾಮಾಣಿಕ, ಶ್ರದ್ಧೆ, ನಿಷ್ಠೆಯಿಂದ ಹಗಲು ರಾತ್ರಿ ಶ್ರಮಿಸಿದ್ದೇನೆ. ಬಿಜೆಪಿ ಮನೆಯ ಕಟ್ಟಿ ಬೆಳೆಸಿದಂತ ಹಿರಿಯನಾದ ನನಗೆ ಪಕ್ಷದಲ್ಲಿ ನಡೆಸಿಕೊಂಡ ರೀತಿ ಆರ್ ಎಸ್.ಎಸ್ ನಿಂದ ಬಂದವರೊಬ್ಬರು ಮತ್ತು ರಾಜಕೀಯ ನಾಯಕರೊಬ್ಬರು ಕಿರುಕುಳ ನೀಡಿ ನೋವುಂಟು ಮಾಡಿದ್ದರಿಂದ ಪಕ್ಷ ಬಿಡುವ ತೀರ್ಮಾನಕ್ಕೆ ಬಂದೆ, ರಾಜಿನಾಮೆ ಕೊಡುವ ಸಂದರ್ಭದಲ್ಲಿ ಭಾವುಕನಾದೆ ಎಂದು ನೊಂದು ನುಡಿದರು.
ಬಿಜೆಪಿ ಪಕ್ಷದಲ್ಲಿ ತತ್ವ ಸಿದ್ಧಾಂತ ಇದ್ದು ನಾಮಿನಿ ಸದಸ್ಯರಾಗುವವರು ಒಕ್ಕಲಿಗ ಮತ್ತು ಲಿಂಗಾಯಿತ ಸಮಾಜದವರು ಟಿಕೆಟ್ ಕೇಳುವಂತಿಲ್ಲ ಎಂಬ ನಿಬಂಧನೆಗೆ ಒಪ್ಪಿ ಯಾವುದೇ ಹುದ್ದೆಗಳನ್ನು ಕೇಳಿರಲಿಲ್ಲ. ಈ ಭಾರಿ ಟಿಕೆಟ್ ಕೊಡಿ ಎಂದು ಕೇಳಿದ್ದೇ ತಪ್ಪಾಯಿತು, ನಂತರದಲ್ಲಿ ಇನ್ನಷ್ಟು ಕಿರುಕುಳ ಹೆಚ್ಚಾಯಿತು ಎಂದು ಹೇಳಿದರು.
ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ನಾನು ಸಕ್ರಿಯನಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ತುಂಬಾ ಆತ್ಮೀಯರಾಗಿದ್ದಾರೆ, ಇದನ್ನೂ ದುರುಪಯೋಗ ಪಡಿಸಿಕೊಳ್ಳದೆ ಸ್ವಾರ್ಥಕ್ಕೆ ಬಳಸದೆ ಸಾರ್ವಜನಿಕರ ಸೇವೆಗೆ ಬಳಸಿದ್ದೇನೆ ಎಂದರು.
ಶಾಸಕ ಸಿ.ಟಿ ರವಿ ರಾಮಾಯಣ ಮಹಾಭಾರತವನ್ನು ಚೆನ್ನಾಗಿ ವರ್ಣಿಸುತ್ತಾರೆ. ರಾಮಸೇತು ನಿರ್ಮಾಣ ಸಂದರ್ಭದಲ್ಲಿ ಅಳಿಲು ಸೇವೆಯನ್ನು ಸ್ಮರಿಸಿದ ಹೆಚ್.ಡಿ ತಮ್ಮಯ್ಯ ಇಂತಹ ಸಂಕಟ ಬಿಜೆಪಿಯಲ್ಲಿ ಈಗಲೂ ಹಲವರಿಗೆ ಆಗುತ್ತಿದೆ. ಶಾಸಕರ ವಿರುದ್ಧ ಮಾತನಾಡಲು ಭಯದ ವಾತಾವರಣ ಇದೆ ಎಂದು ಟೀಕಿಸಿದರು.
ಶಾಸಕರ ಹಿಟ್ಲರ್ ಸಂಸ್ಕೃತಿ, ಆರ್.ಎಸ್.ಎಸ್. ವ್ಯಕ್ತಿಯ ನಡೆ ನೋವುಂಟು ಮಾಡಿತು. ೨೩ ವರ್ಷಗಳ ಕಾಲ ನಗರ ಸಭೆಯ ರಾಜಕಾರಣದಲ್ಲಿ ಯಾವುದೇ ಗುತ್ತಿಗೆ ಕೆಲಸ, ರಿಯಲ್ ಎಸ್ಟೇಟ್ ಮಾಡಿಲ್ಲ, ಈಗಾಗಲೇ ಹಲವಾರು ಗುತ್ತಿಗೆದಾರರು ಇವರ ಚಿತಾವಣೆಯಿಂದ ಊರು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
೧೦ ವರ್ಷಗಳ ಹಿಂದೆಯೇ ಕೆ.ಜೆ.ಪಿಯಿಂದ ಸ್ಪರ್ಧೆ ಮಾಡಬಹುದಿತ್ತು. ಬಿಜೆಪಿ ಪಕ್ಷದ ಸಂಘಟನೆಗಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದು ಟಿಕೆಟ್ ಆಕಾಂಕ್ಷಿ ಎಂದು ತಿಳಿಯುತ್ತಿದ್ದಂತೆ ಬಿಜೆಪಿಯ ಕೆಲವರ ವರ್ತನೆಯೇ ಬದಲಾಯಿತು. ಹೊರಬಂದ ಮೇಲೂ ನಿಮ್ಮ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿರುವುದು ಸಂತೋಷವಾಗಿದೆ, ಕಾಂಗ್ರೆಸ್ ಪಕ್ಷ ಸೇರಿ ಸ್ವಾರ್ಥ ರಾಜಕಾರಣ ಮಾಡದೆ ಜನರ ಕಷ್ಟ ಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದರು.
ಕಾಂಗ್ರೇಸ್ ಪಕ್ಷದಲ್ಲಿ ಈಗಾಗಲೇ ತಾವು ಮತ್ತು ಗಾಯಿತ್ರಿ ಶಾಂತೇಗೌಡ ಸೇರಿ ೮ ಜನ ಟಿಕೆಟ್ ಆಕಾಂಕ್ಷಿಗಳಿದ್ದು ಯಾರಿಗೇ ಟಿಕೆಟ್ ಸಿಕ್ಕಿ ಅಭ್ಯರ್ಥಿಗಳಾದರೆ ಅವರ ಪರವಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ನನಗೇನು ಹೊಸದಲ್ಲ, ಕ್ಷೇತ್ರದಲ್ಲಿ ಜನರ ಸರ್ವೆ ಸಂದರ್ಭದಲ್ಲಿ ಜನಪರ ಒಲವು ಯಾರಿಗೆ ಸಿಗುತ್ತೆ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.
ಬಿಜೆಪಿಯಲ್ಲಿದ್ದಾಗ ಪಕ್ಷ ನಿಷ್ಠೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಯಾರಿಗಾದರು ನೋವುಂಟಾಗಿದ್ದರೆ ಕ್ಷಮಿಸಿ ಎಂದ ಅವರು ನೆರೆದಿದ್ದ ಅಪಾರವಾದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.