ಹಾಸನ: ಮಾರ್ಚ್ ೧ ರಂದು ಕಾಂಗ್ರೆಸ್ ನ ಪ್ರಜಾ ದ್ವನಿ ಯಾತ್ರೆ ಕಾರ್ಯಕ್ರಮ ನಡೆಸಲು ಹೊಳೆನರಸೀಪುರ ಪುರಸಭೆಯಿಂದ ನೀಡಲಾಗಿದ್ದ ಅನುಮತಿಯನ್ನು ರಾಜಕೀಯ ಪ್ರಭಾವ ಬಳಸಿ ಸ್ಥಳೀಯ ಶಾಸಕ ಎಚ್.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅನುಮತಿ ಹಿಂಪಡೆಯುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಹೊಳೆನರಸೀಪುರ ಪಟ್ಟಣದ ಬಯಲು ಮಂದಿರದಲ್ಲಿ ಕಾರ್ಯಕ್ರಮಕ್ಕೆ ಫೆಬ್ರವರಿ.೧೫ ರಂದು ಅನುಮತಿ ನೀಡಿದ್ದರು. ನಮಗೆ ಅನುಮತಿ ನೀಡಿದ ಮರು ದಿನವೇ ತಮಗೂ ಮೊದಲೇ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಲಾಗಿದೆ ಎಂದು ಸುಳ್ಳು ಹೇಳಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇಡೀ ರಾಜ್ಯದಲ್ಲಿ ಪ್ರಜಾ ದ್ವನಿ ಯಾತ್ರೆ ಯಶಸ್ವಿಯಾಗಿದೆ. ಆದ್ರೆ ಹೊಳೆ ನರಸೀಪುರ ತಾಲೂಕಿನಲ್ಲಿ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ, ಈಗಾಗಲೇ ಹೊಳೆನರಸೀಪುರದಲ್ಲಿ ಬದಲಾವಣೆ ಬಯಸಿರುವ ಜನರು ಈ ಬಾರಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆ ಎಂದರು. ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಆಡಳಿತ ನಡೆಸಿರುವ ರೇವಣ್ಣ ಕುಟುಂಬಕ್ಕೆ ಈ ಬಾರಿಯ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ಈಗಾಗಲೇ ನಿಗದಿಯಾಗಿರುವ ಸಮಯಕ್ಕೆ ಹಾಗೂ ನಿಗದಿಯಾಗಿರುವ ಸ್ಥಳದಲ್ಲಿ ಕಾರ್ಯಕ್ರಮ ಮಾಡಿಯೇ ತೀರುತ್ತೇವೆ, ಕಾರ್ಯಕ್ರಮದಲ್ಲಿ ಗಲಾಟೆ ನಡೆದರೆಶಾಸಕರು, ಜಿಲ್ಲಾಡಳಿತವೇ ಹೊಣೆಯಾಗುತ್ತದೆ. ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವನಾಥ್, ಮುಜಾಹಿದ್, ಪುಟ್ಟರಾಜ, ಸುನಿಲ್, ಗೋವಿಂದ್ ರಾಜ್ ಇತರರು ಉಪಸ್ಥಿತರಿದ್ದರು.