ಹಾಸನ: ಮೀನು ಹಿಡಿಯಲು ಹೋಗಿ ಗುಂಡೇಟಿನಿಂದ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಲೇಶಪುರ ತಾಲ್ಲೂಕಿನ ಯಸಳೂರು ಹೋಬಳಿಯ ತಂಬುಗೆರೆ ಗ್ರಾಮದ ವಾಸಿಗಳಾದ ನಾಗರಾಜು ಅಲಿಯಾಸ್ ದುಬಾಸಿ (೬೦) ಮತ್ತು ಅನಿಲ್ (೨೮) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಜ. ೯ರಂದು ರಾತ್ರಿ ೮-೦೦ ಗಂಟೆ ಸಮಯದಲ್ಲಿ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ತಂಬಲಗೇರಿ ಗ್ರಾಮದ ವಾಸಿಗಳಾದ ರಾಜಾಚಾರಿ, ದಯಾನಂದ, ಪದ್ಮನಾಭ, ಮತ್ತು ನವೀನ್, ರವರು ಸ್ನೇಹಿತರಾಗಿದ್ದು, ಇವರುಗಳು ಸದರಿ ಗ್ರಾಮದ ಪಕ್ಕದಲ್ಲಿರುವ ದೊಡ್ಡಗದ್ದೆ ಹಳ್ಳದಲ್ಲಿ ಬಲಹಾಕಿ ಮೀನು ಹಿಡಿಯುತ್ತಿದ್ದರು.
ಆಗ ಹಳ್ಳದ ದಡದಲ್ಲಿ ಬೆಂಕಿ ಹಾಕಿ ನವೀನ್, ದಯಾನಂದ ಮತ್ತು ಪದ್ಮನಾಭ, ರವರುಗಳು ದಡದಲ್ಲಿ ನಿಂತಿದ್ದು, ಪಿರಾದಿಯವರು ಹಳ್ಳದ ದಡದಲ್ಲಿ ಕುಳಿತಿದ್ದು, ಅದೇ ಸಮಯಕ್ಕೆ ಇದ್ದಕ್ಕಿದ್ದಂತೆ ಬಂದೂಕು ಹಾರಿಸಿದ ಶಬ್ದ ಕೇಳಿಸಿದ್ದು, ಕೂಡಲೇ ನವೀನ್ ಜೋರಾಗಿ ಕಿರುಚಿ ನೀರಿನ ದಡಕ್ಕೆ ಬಿದ್ದನು. ದಯಾನಂದ ಹಾಗೂ ಪದ್ಮನಾಭ, ರವರು ಕಿರುಚಾಡಿಕೊಂಡು ಒದ್ದಾಡುತ್ತಿದ್ದರು.
ನವೀನ ಅವರ ಎದೆಗೆ ಹಾಗೂ ಇತರೆ ಕಡೆ ಬಂದೂಕಿನ ಚರಿ ಬಿದ್ದು, ಬಾಯಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟರು. ದಯಾನಂದ ರವರಿಗೆ ಸೊಂಟ ಮತ್ತು ಕೈಗೆ ಮತ್ತು ಪದ್ಮನಾಭ, ರವರಿಗೆ ಕೈ ಬಂದೂಕಿನ ಚರಿ ರಕ್ತ ಹೊರ ಬರುತ್ತಿದ್ದು, ಅಲ್ಲಿಗೆ ಬಂದ ಅನಿಲ್ ಮತ್ತು ನಾಗರಾಜು ಅಲಿಯಾಸ್ ದುಬಾಸಿ ಅವರು ದಯಾನಂದ ಮತ್ತು ಪದ್ಮನಾಭ ಅವರನ್ನು ಚಿಕಿತ್ಸೆಗೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರಾಜಾಚಾರಿ ಅವರು ನೀಡಿದ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವೈಯಕ್ತಿಕ ದ್ವೇಷಕ್ಕೆ ಕೊಲೆ
ಈ ಪ್ರಕರಣವು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಕೊಲೆ ಪ್ರಕರಣವಾಗಿದೆ ಎಂದು ಪೊಲೀಸರು ನಡೆಸಿರುವ ಪ್ರಾಥಮಿಕ ಹಂತದ ವಿಚಾರಣೆಯಿಂದ ತಿಳಿದು ಬಂದಿದೆ.