ಚನ್ನರಾಯಪಟ್ಟಣ: ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ, ಅವರನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದುದು ಸಹಕಾರ ಕ್ಷೇತ್ರದ ಆದ್ಯ ಕರ್ತವ್ಯ ಸಹಕಾರ ಕ್ಷೇತ್ರ ಉಳಿದರೆ ರೈತರು ಅಭಿವೃದ್ಧಿ ಹೊಂದಬಹುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯ ಪಟ್ಟರು.
ಪಟ್ಟಣದ ಮೈಸೂರು ರಸ್ತೆಯ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ೮೬ ರೈತ ಫಲಾನುಭವಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ೩೦ ಲಕ್ಷದ ೮೦ ಸಾವಿರ ರೂಪಾಯಿ ಸಾಲದ ಚೆಕ್ ವಿತರಣೆ ಮಾಡಿದರು ಅವರು ಮಾತನಾಡಿ ಹಣವನ್ನು ಕ್ರೂಡಿಕರಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಿದ ಹೊಸ ಸದಸ್ಯರಿಗೆ ಸಾಲದ ಚೆಕ್ ವಿತರಣೆ ಮಾಡಲಾಗಿದೆ.
ಕಸಬಾ ಪ್ರಾಥಮಿಕ ಸಹಕಾರ ಸಂಘದಿಂದ ಪ್ರಸಕ್ತ ವರ್ಷದಲ್ಲಿ ೧೯೨೬ ರೈತರಿಗೆ ೮ ಕೋಟಿ ೩೫ ಲಕ್ಷದ ೧೨ ಸಾವಿರ ರೂಪಾಯಿ ಸಾಲವನ್ನು ನೀಡಲಾಗಿದ್ದು ಕೃಷಿ ಸಾಲದ ಜತೆಗೆ ಮಧ್ಯಮಾವಧಿ ಸಾಲವಾಗಿ ೨೯ ರೈತರಿಗೆ ಒಂದು ಕೋಟಿ ೧೫ ಲಕ್ಷದ ೬೬ ಸಾವಿರ ರೂಪಾಯಿ ನೀಡಲಾಗಿದೆ. ೬೮ ರೈತರಿಗೆ ೬ ಲಕ್ಷ ೮೦ ಸಾವಿರ ರೂಪಾಯಿ ಹೈನುಗಾರಿಕೆ ಸಾಲ ನೀಡಲಾಗಿದೆ ರೈತರು ಬ್ಯಾಂಕಿನಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಂಡು ಒಂದು ವರ್ಷದೊಳಗೆ ಸಾಲ ಮರುಪಾವತಿ ಮಾಡಿ ಸಾಲ ತೀರುವಳಿ ಮಾಡಿ ಸಂಘವನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.
ಕಸಬಾ ಸೊಸೈಟಿಯು ಸುಸಜ್ಜಿತವಾದ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡಿ ವಾರ್ಷಿಕ ೬ ಲಕ್ಷದ ೪೦ ಸಾವಿರ ರೂಪಾಯಿ ಬಾಡಿಗೆ ಆದಾಯ ಬರುವಂತಾಗಿದೆ ಕಸಬಾ ಹೋಬಳಿ ವ್ಯಾಪ್ತಿಯ ನಾಲ್ಕು ಸೊಸೈಟಿಗಳಿಂದ ೨೫ ಕೋಟಿ ರೂ ಸಾಲ ನೀಡಲಾಗಿದೆ. ತಾಲೂಕಿನಾದ್ಯಂತ ೪೭ ಸಾವಿರ ರೈತರಿಗೆ ಸಾಲ ನೀಡಲಾಗಿದ್ದು ನಾಲ್ಕು ಬಾರಿ ಸಾಲಮನ್ನಾದಿಂದ ಕಸಬಾ ಸೊಸೈಟಿಗೆ ೧೬ ಕೋಟಿ ಸಾಲ ಮನ್ನವಾಗಿದೆ ತಾಲೂಕಿನಾದ್ಯಂತ ೩೯ ಸಾವಿರ ರೈತರಿಗೆ ೫೨೦ ಕೋಟಿ ಸಾಲ ಮನ್ನಾದ ಸೌಲಭ್ಯ ನೀಡಲಾಗಿದೆ ರೈತರು ಎಲ್ಲರೂ ಒಂದೇ ಎಂಬ ಭಾವನೆಯಿಂದ ತಾಲ್ಲೂಕಿನ ಎಲ್ಲ ರೈತರಿಗೆ ಸಾಲ ಸಿಗುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಅಧ್ಯಕ್ಷ ಎಂ.ವಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ಸಿ.ಎನ್.ವಾಸು, ನಿರ್ದೇಶಕರಾದ ಕೆ.ಎಸ್. ಮಂಜಪ್ಪ, ಡಿ.ಕೆ.ರಂಗಸ್ವಾಮಿ, ಜಿ.ಕೆ.ಮಧು, ಕೆ.ಎನ್. ಬೋರೆಗೌಡ, ಮೇಲ್ವಿಚಾರಕ ಎಸ್.ಕೆ.ಅಭಿಲಾಶ್, ಸಿಇಒ ಸಿ.ಎನ್.ರಮೇಶ್, ಸದಸ್ಯರು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು.