ಹಾಸನ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಎನ್ಎಚ್ಎಂ ನೌಕರರು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರಣ ತಾಲ್ಲೂಕು ಹೋಬಳಿ ಕೇಂದ್ರಗಳಲ್ಲಿರುವ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗಿ ಬಡರೋಗಿಗಳು ಪರದಾಡುವಂತಾಗಿದೆ.
ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಆಗಮಿಸಿರುವ ನೌಕರರು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ಸ್ವರೂಪ ತೀವ್ರಗೊಳಿಸಿದ್ದಾರೆ. ಸುಮಾರು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಇವರ ಮನವಿಗೆ ಸ್ಪಂದಿಸಿಲ್ಲದ ಕಾರಣ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದ್ದಾರೆ.
ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ಕೆಲಸಕ್ಕೆ ಯಾವೊಬ್ಬ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗದೆ ಇರುವ ಕಾರಣ ಸಿಬ್ಬಂದಿಗಳ ಕೊರತೆ ಹೆಚ್ಚಾಗಿದ್ದು ಸಣ್ಣ ಮಕ್ಕಳ ವಿಭಾಗದ ಘಟಕದಲ್ಲಿ ಎನ್ಎಚ್ಎಮ್ ಸಿಬ್ಬಂದಿಗಳು ಮಾತ್ರ ಇರುವ ಕಾರಣ ತುಂಬಾ ತೊಂದರೆ ಉಂಟಾಗುತ್ತಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಸಮುದಾಯ ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಆಗುತ್ತಿದೆ.
ಆರೋಗ್ಯ ಸರಿ ಇಲ್ಲಾ ಎಂದು ಬಂದರೆ ಆರೋಗ್ಯ ಇಲಾಖೆ ವೈದ್ಯರು ನಿರ್ಲಕ್ಷ ತೋರುತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳಿಗೆ ತುಂಬಾ ಸುಸ್ತಾಗಿದೆ ಮಕ್ಕಳನ್ನು ದಾಖಲಿಸಿಕೊಳ್ಳಿ ಎಂದು ಹೇಳಿದರು ಲೆಕ್ಕಿಸದೆ ಕಾಟಾಚಾರಕ್ಕೆ ಮಕ್ಕಳಿಗೆ ಔಷಧಿ ವಿತರಣೆ ಮಾಡಿ ಕಳಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತಿದ್ದಾರೆ. ಮಕ್ಕಳು ಸಾವು ನೋವು ನಡುವೆ ಒದ್ದಾಡುವ ಪರಿಸ್ಥಿತಿ ಎದುರಾಗಿದೆ ಆದರೆ ಯಾವುದೇ ಮೇಲಾಧಿಕಾರಿಗಳು ಇದರ ಬಗ್ಗೆ ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪ ಹೆಚ್ಚಾಗುತ್ತಿದೆ.
ಆಸ್ಪತ್ರೆಗಳಲ್ಲಿ ಹೆಚ್ಚಿನ ಅನಾಹುತ ಆಗುವ ಮೊದಲು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.