ಹಾಸನ: ಭಾರತದ ಆಡಳಿತದಲ್ಲಿ ನ್ಯಾಯಾಂಗ ವ್ಯವಸ್ಥೆ ಅತಿ ಮುಖ್ಯವಾಗಿದ್ದು, ಬಾರ್ ಅಸೋಸಿಯೇಷನ್ ಒಂದು ಮುಖ್ಯವಾದ ಅಂಗ ಸಾರ್ವಜನಿಕರಿಗೆ ನ್ಯಾಯ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪ್ರಸನ್ನ ಬಿ ವರಾಳೆಯವರು ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಸನ ಹಾಗೂ ಅರಕಲಗೂಡು ವಕೀಲರ ಸಂಘ ಇವರ ಸಂಯುಕ್ತಾಶ್ರಯ ದಲ್ಲಿ ಏರ್ಪಡಿಸಿದ್ದ ವಕೀಲರ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಯುವ ವಕೀಲರ ಸಮೂಹ ಶ್ರದ್ದೆ ನಿಷ್ಟೆಯಿಂದ ನ್ಯಾಯದ ಹಾದಿಯಲ್ಲಿ ಕೆಲಸ ಮಾಡಬೇಕಾಗಿದೆ. ವಕೀಲರ ಭವನ ಉತ್ತಮ ಸೌಕರ್ಯಗಳಿಂದ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು ಇದರ ಸದುಪಯೋಗ ಮಾಡಿಕೊಳ್ಳಿ ಎಂದರು.
ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಅವರು ಮಾತನಾಡಿ, ೨೦೧೧ ರಲ್ಲಿ ಶಂಕು ಸ್ಥಾಪನೆಯಾಗಿತ್ತು ಈಗ ಕಟ್ಟಡ ಮನೆ ರೀತಿ ಆಗಿದೆ. ಈ ಕಟ್ಟಡ ದುರುಪಯೋಗವಾಗದಂತೆ ಕಾಪಾಡಬೇಕು ಇದಕ್ಕೆ ಪೀಠೋಪಕರಣಗಳನ್ನು ಉಸ್ತುವಾರಿ ಸಚಿವರು ನೀಡುತ್ತಾರೆ ಎಂದರು.
೧೨ ನೇ ಶತಮಾನದ ಬಸವಣ್ಣನವರ ವಚನಗಳನ್ನು ನಾವು ಅನುಸರಿಸಿದ್ದರೆ.ಕಾನೂನು ಅನ್ನೊದೆ ಬೇಕಿರಲಿಲ್ಲ ಎಂದರು, ಜನರಿಗೆ ಕಡಿಮೆ ಖರ್ಚಿನಲ್ಲಿ ನಿಗದಿತ ಅವಧಿಯಲ್ಲಿ ನ್ಯಾಯ ಕೊಡಿಸಿ ಎಂದು ವಕೀಲರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಅವರು ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಚಿಂತನೆಯಂತೆ ಈ ಬೃಹತ್ ದೇಶದಲ್ಲಿ ನಾವೆಲ್ಲರೂ ಈ ದೇಶದ ಪ್ರಜೆಗಳು ನಾವು ಇರುವಷ್ಟು ದಿನ ಪ್ರಜಾಪ್ರಭುತ್ವದ ಅಡಿಯಲ್ಲಿ ಇರಬೇಕು, ನ್ಯಾಯಾಂಗ ಎಂದರೆ ಪ್ರತಿಯೋಬ್ಬ ಪ್ರಜೆಯ ಹಕ್ಕನ್ನು ರಕ್ಷಿಸಬೇಕಾಗಿದೆ ಎಂದ ಅವರು ವಕೀಲರು ಕೈಜೋಡಿಸಬೇಕು ಎಂದರು.
ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಹೆಚ್.ಪಿ. ಸಂದೇಶ್ ಅವರು ಮಾತನಾಡಿ ನಾನು ಕನ್ನಡ ಬಾಷೆಯಲ್ಲಿ ಮಾತನಾಡಲು ಸಂತೋಷ ಪಡುತ್ತೇನೆ. ನಜೀರ್ ಸರ್ ರವರು ಜಿಲ್ಲೆಯಲ್ಲಿ ಆಡಳಿತಾತ್ಮಕ ನ್ಯಾಧೀಶರಾಗಿದ್ದಾಗ ಎಲ್ಲಾ ತಾಲ್ಲೂಕುಗಳಿಗೆ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಿ ಅಂದು ಮಾಡಿದ ಕೆಲಸ ಈಗ ಸಾಕಾರವಾಗಿದೆ. ಭವನ ದುರುಪಯೋಗ ಆಗದೆ ಸತ್ಯ ಧರ್ಮ ,ನ್ಯಾಯವನ್ನು ಎತ್ತಿ ಹಿಡಿಯುವ ಭವನ ಆಗಬೇಕು ಎಂದರು.
ವಕೀಲರು ಶಿಸ್ತು, ಸಂಯಮ, ಆತ್ಮವಿಶ್ವಾಸ, ಚೈತನ್ಯದಿಂದ ಕೆಲಸ ಮಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ಕೊಡಬೇಕು, ಮಕ್ಕಳನ್ನು ದೇಶದ ಆಸ್ತಿಯಾಗಿ ಮಾಡಿ , ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿ ಎಂದರು. ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯನವರು ಮಾತನಾಡಿ ನಜಿರ್ ಸಾಬ್ ರವರು ನಮ ದೇಶ ಹಾಗೂ ರಾಜ್ಯದ ಆಸ್ತಿ ಅವರು ನೀಡಿರುವ ತೀರ್ಪುಗಳು ತುಂಬಾ ಗೌರವಯುತವಾದವು. ವಕೀಲರ ಭವನಕ್ಕೆ ೨೫ ಲಕ್ಷರೂಗಳ ಪೀಠೋಪಕರಣಗಳಿಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಅನುದಾನ ಕೊಡಿಸುವುದಾಗಿ ತಿಳಿಸಿದರು.
ಪ್ರತಿಯೊಬ್ಬ ಮನುಷ್ಯನು ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಎಲ್ಲಾ ಇಲಾಖೆ ಅಧಿಕಾರಿಗಳು ಬಡವರಿಗೆ ದೀನ ದಲಿತರಿಗೆ ಅತಿ ವೇಗವಾಗಿ ನ್ಯಾಯಯುತವಾಗಿ ಸವಲತ್ತು ತಲುಪುವಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್.ದೇವದಾಸ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಲ್ ವಿಜಯ ಕ್ಷ್ಮೀದೇವಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ರವಿಕಾಂತ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾದ ಹೆಚ್.ಎಲ್. ರಘು, ಅರಕಲಗೂಡು ವಕೀಲರ ಸಂಘ ಅಧ್ಯಕ್ಷರಾದ ಅರುಣ್ ಕುಮಾರ್, ಅರಕಲಗೂಡು ವಕೀಲರ ಸಂಘ ಕಾರ್ಯದರ್ಶಿ ಎಂ.ಕೆ.ದೇವರಾಜು, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾ ಹಕ ಅಭಿಯಂತ ಸಿ.ಎಸ್.ಮಂಜು-ಮತ್ತಿತರರು ಭಾಗವಹಿಸಿದ್ದರು.